ಬೆಂಗಳೂರು, ಮಾರ್ಚ್ 17– ರೈತರಿಗೆ ಹಾಗೂ ಜನಸಾಮಾನ್ಯರಿಗೆ ಹೊರೆಯಾಗದ ರೂ.125 ಕೋಟಿಗಳ ಕೊರತೆಯ 1999–2000ನೇ ಸಾಲಿನ ಬಜೆಟ್ ಅನ್ನು ಹಣಕಾಸು ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿದರು.
ಬಜೆಟ್ ಕೊರತೆ ಪ್ರಮಾಣವನ್ನು ಕಳೆದ ಸಾಲಿನ ಕೊರತೆಯ ಪರಿಷ್ಕೃತ ಅಂದಾಜಿನ ಮಟ್ಟದಲ್ಲೇ ಇರಿಸಲಾಗಿದೆ. ರಸಗೊಬ್ಬರಗಳ ಮೇಲಿನ ಮಾರಾಟ ತೆರಿಗೆ, ಕಾಫಿ ಬೆಳೆ ಮೇಲೆ ಇದ್ದ ಕೃಷಿ ವರಮಾನ ತೆರಿಗೆ ಹಾಗೂ ವಾಹನಗಳ ವರ್ಗಾವಣೆ ಮಾರಾಟ ತೆರಿಗೆ ರದ್ದು ಮಾಡಲಾಗಿದೆ.
ಮೀಸಲಾತಿ ಸುತ್ತೋಲೆ ಸಂಸತ್ನಲ್ಲಿ ಕೋಲಾಹಲ
ನವದೆಹಲಿ, ಮಾರ್ಚ್ 17– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸುವ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಳುವ ಪಕ್ಷವನ್ನು ಹೊರತುಪಡಿಸಿ,
ಪ್ರತಿಪಕ್ಷಗಳ ದಲಿತ ವರ್ಗಗಳ ಸದಸ್ಯರು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರಿಂದ ಲೋಕಸಭೆಯ ಕಲಾಪ ಇಂದು ನಡೆಯಲಿಲ್ಲ.
ಬೂಟಾ ಸಿಂಗ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ವರ್ಗದ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಅಂಗಳಕ್ಕೆ ಧಾವಿಸಿ ಘೋಷಣೆ ಕೂಗಿದರು.