ಬೆಂಗಳೂರು, ಏ. 28– ಬೆಂಗಳೂರು–ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯಿಂದ (ಮೂಲ ಸೌಲಭ್ಯ ಅಂಗಳ) ಭೂಮಿ ಕಳೆದುಕೊಳ್ಳುವ ರೈತರಿಗೆ ಯಾವುದೇ ನಷ್ಟವಾಗದ ರೀತಿಯಲ್ಲಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಇಲ್ಲಿ ಭರವಸೆ ನೀಡಿದರು.
ಸುಮಾರು ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದ 111 ಕಿ.ಮೀ ಉದ್ದದ ನಾಲ್ಕು ಸಾಲುಗಳ ಬೆಂಗಳೂರು–ಮೈಸೂರು ಇನ್ಸ್ಟ್ರಾಕ್ಚರ್ ಕಾರಿಡಾರ್ ಯೋಜನೆಗೆ ಕೆಂಗೇರಿ ಬಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಪರಿಹಾರ ಕೊಡುವ ವಿಚಾರದಲ್ಲಿ ಅನ್ಯಾಯವಾಗಿದ್ದರೆ ಅದನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳನ್ನು ಕರೆದು ಚರ್ಚಿಸುವುದಾಗಿ’ ಹೇಳಿದ ಅವರು ‘ಭೂಮಿ ಕಳೆದುಕೊಂಡು ನಷ್ಟಕ್ಕೊಳಗಾಗುವ ರೈತರಿಗೆ ಸೂಕ್ತ ಪರಿಹಾರ ಕೊಡುವ ವ್ಯವಸ್ಥೆ ಮಾಡುವುದಾಗಿ’ ತಿಳಿಸಿದರು.
ವೀರಪ್ಪನ್ನಿಂದ ತಮಿಳ್ನಾಡು ಅರಣ್ಯ ಸಿಬ್ಬಂದಿ ಅಪಹರಣ
ಮೈಸೂರು, ಏ. 28– ಹಣ ನೀಡುವಂತೆ ಒತ್ತಾಯಿಸಿ ನರಹಂತಕ ವೀರಪ್ಪನ್ ಗುಂಪಿನವರು ತಮಿಳ್ನಾಡು ಅರಣ್ಯ ಇಲಾಖೆಗೆ ಸೇರಿದ ಮೂವರನ್ನು ಒತ್ತೆಯಾಳಾಗಿ ಸೆರೆ ಹಿಡಿದಿದ್ದು, ಹೊಸ ಬಿಕ್ಕಟ್ಟೊಂದನ್ನು ಸೃಷ್ಟಿಸುವ ಸಾಧ್ಯತೆ ಕಾಣಿಸಿಕೊಂಡಿದೆ.
ಅಭಿಮನ್ಯು ಎಂಬ ಒಬ್ಬ ಗಾರ್ಡ್ ಹಾಗೂ ಸಿ. ಪಳನಿ ಹಾಗೂ ಸದಾಶಿವನ್ ಎಂಬ ಇಬ್ಬರು ವಾಚರ್ಗಳನ್ನು ಭಾನುವಾರ ಹೊಗೇನಕಲ್ ಜಲಪಾತಕ್ಕೆ ಸಮೀಪದ ಪೆನ್ನಗ್ರಾಮದ ಬಳಿ ವೀರಪ್ಪನ್ ಗುಂಪು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.