ಕಾಂಗ್ರೆಸ್ ಬಿಕ್ಕಟ್ಟು ‘ಪರಿಹಾರ’- ಇಂದಿರಾ ವಿರುದ್ಧ ಕ್ರಮವಿಲ್ಲ; ಸಿಂಡಿಕೇಟ್ ಅಸ್ತವ್ಯಸ್ತ ನವದೆಹಲಿ, ಆ. 25– ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಸ್ವಾತಂತ್ರ್ಯ ಕೋರಿದ್ದಕ್ಕಾಗಿ ಪ್ರಧಾನಮಂತ್ರಿ ಇಂದಿರಾಗಾಂಧಿ ಮತ್ತಿತರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದನ್ನು ತಳ್ಳಿಹಾಕಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದ್ದರಿಂದ ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ಪಕ್ಷವನ್ನು ತಲ್ಲಣಗೊಳಿಸಿದ್ದ ಬಿಕ್ಕಟ್ಟು ಇಂದು ರಾತ್ರಿ ಅಂತ್ಯಗೊಂಡಿತು.
‘ಯಾರ ರಾಜೀನಾಮೆಯೂ ಇಲ್ಲ, ಯಾರೂ ಹೋಗುವುದಿಲ್ಲ’ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಲಿಯವರು ಸುದ್ದಿಗಾರರಿಗೆ ತಿಳಿಸಿದರು.
ಮುರಾರಜಿ, ಕಾಮರಾಜ್ಗೆ ಅಸಮಾಧಾನ ನವದೆಹಲಿ, ಆ. 25– ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸಿರುವ ‘ಸೌಮ್ಯ ಸ್ವರೂಪ’ದ ನಿರ್ಣಯದ ಬಗ್ಗೆ ಮಾಜಿ ಉಪಪ್ರಧಾನಮಂತ್ರಿ ಮುರಾರಜಿ ದೇಸಾಯಿ ಮತ್ತು ಕಾಮರಾಜ್ ಅಸಮಾಧಾನ ವ್ಯಕ್ತಪಡಿಸಿರುವರೆಂದು ತಿಳಿದು ಬಂದಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಸ್ವಾತಂತ್ರ್ಯ ಕೇಳಿದ ಪ್ರಧಾನಮಂತ್ರಿ ಇಂದಿರಾಗಾಂಧಿ ಮತ್ತು ಇಬ್ಬರು ಸಚಿವರು ಹಾಗೂ ಇನ್ನಿತರ ಸದಸ್ಯರ ಬಗ್ಗೆ ನಿರ್ಣಯದಲ್ಲಿ ಸ್ಪಷ್ಟ ಪ್ರಸ್ತಾಪವಿರಬೇಕಾಗಿತ್ತೆಂಬುದು ಅವರಿಬ್ಬರ ಇಚ್ಛೆಯಾಗಿತ್ತೆಂದು ಗೊತ್ತಾಗಿದೆ.