ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಸೋನಿಯಾ ರಾಜೀನಾಮೆ: ಕಾಂಗ್ರೆಸ್ ಕಾರ್ಯಕಾರಿಣಿ ತಿರಸ್ಕಾರ

Published 17 ಮೇ 2024, 20:35 IST
Last Updated 17 ಮೇ 2024, 20:35 IST
ಅಕ್ಷರ ಗಾತ್ರ

ಸೋನಿಯಾ ರಾಜೀನಾಮೆ: ಕಾಂಗ್ರೆಸ್ ಕಾರ್ಯಕಾರಿಣಿ ತಿರಸ್ಕಾರ

ನವದೆಹಲಿ, ಮೇ 17 (ಪಿಟಿಐ)– ತಮ್ಮ ವಿದೇಶಿ ಮೂಲದ ಪ್ರಶ್ನೆಯನ್ನು ಪಕ್ಷದ
ಹಿರಿಯ ಮುಖಂಡರಾದ ಶರದ್ ಪವಾರ್, ಸಂಗ್ಮ ಮತ್ತು ತಾರಿಖ್ ಅನ್ವರ್ ಎತ್ತಿರುವ ಕಾರಣದಿಂದ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರು ಇಂದು ರಾತ್ರಿ ರಾಜೀನಾಮೆ ನೀಡಿದರು. 

ಆದರೆ, ಅವರ ರಾಜೀನಾಮೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸರ್ವಾನು
ಮತದಿಂದ ತಿರಸ್ಕರಿಸಿದೆ. 

ಪಕ್ಷದ ಅಧ್ಯಕ್ಷರಾಗಿಯೇ ಮುಂದುವರಿಯುವಂತೆ ಸಮಿತಿ ನಿರ್ಣಯ ಅಂಗೀಕರಿಸಿ, ಸೋನಿಯಾ ಗಾಂಧಿ ಅವರನ್ನು ಕೋರಿಕೊಂಡಿದೆ. 

ಸೋನಿಯಾ ಅಧ್ಯಕ್ಷತೆ ಬಿಡಲು ಕೋರಿಲ್ಲ: ಶರದ್ ಪವಾರ್ ಸ್ಪಷ್ಟನೆ

ನವದೆಹಲಿ, ಮೇ 17 (ಪಿಟಿಐ)– ಸೋನಿಯಾ ಗಾಂಧಿ ಅವರು, ಅವರ ವಿದೇಶಿ ಮೂಲದಿಂದಾಗಿ ದೇಶದ ಪ್ರಧಾನಿ ಆಗುವುದರ ವಿರುದ್ಧ ಧ್ವನಿ ಎತ್ತಿರುವ ಶರದ್ ಪವಾರ್, ‘ಸೋನಿಯಾ ಪಕ್ಷದ ಅಧ್ಯಕ್ಷೆ ಆಗಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದು ಇಂದು ರಾತ್ರಿ ಇಲ್ಲಿ ತಿಳಿಸಿದ್ದಾರೆ. 

‘ಸೋನಿಯಾ ಅವರು ಪಕ್ಷದ ಅಧ್ಯಕ್ಷೆಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವುದರ ಬಗ್ಗೆ ನಾವು (ಶರದ್ ಪವಾರ್, ಮಾಜಿ ಸ್ಪೀಕರ್ ಸಂಗ್ಮ ಮತ್ತು ತಾರಿಖ್ ಅನ್ವರ್) ಅಪಸ್ವರ ಎತ್ತಿಲ್ಲ. ನಮ್ಮ ಪತ್ರದಲ್ಲಿ ಅಧ್ಯಕ್ಷರಾಗಿ ಅವರು ಪಕ್ಷ ಬಲಪಡಿಸಿದ್ದನ್ನು ನಾವು ಮುಕ್ತಕಂಠದಿಂದ ಹೊಗಳಿದ್ದೇವೆ’ ಎಂದು ‘ಆಜ್‌ತಕ್’ ಟಿವಿ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ಪ್ರಧಾನಿ ಶಿಲಾನ್ಯಾಸ

ಹುಬ್ಬಳ್ಳಿ, ಮೇ 17– ಉತ್ತರ ಕರ್ನಾಟಕದ ಒಂದು ಶತಮಾನದ ಕನಸಾಗಿರುವ 615 ಕೋಟಿ ರೂಪಾಯಿ ಅಂದಾಜು ವೆಚ್ಚದ ಹುಬ್ಬಳ್ಳಿ–ಅಂಕೋಲಾ ಬ್ರಾಡ್‌ಗೇಜ್ ರೈಲು ಮಾರ್ಗಕ್ಕೆ ಇಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜನರ ಹರ್ಷೋದ್ಗಾರದ ಮಧ್ಯೆ ಶಿಲಾನ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಒಂದು ಮಿತಿ ಇದೆ. ಜನರು ಚುನಾವಣೆಯಲ್ಲಿ ಮತ ಹಾಕಿ, ಜನಪ್ರತಿ
ನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಈ ಪ್ರತಿನಿಧಿಗಳು ದೇಶವನ್ನು ಪ್ರಗತಿಯತ್ತ
ಕೊಂಡೊಯ್ಯಬೇಕೆಂಬುದು ಅವರ ಆಶಯ. ಆದರೆ, ಜನಪ್ರತಿನಿಧಿಗಳು ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದನ್ನು ಬಿಟ್ಟು ರಾಜಕೀಯವನ್ನೇ ಮಾಡಿದರೆ, ದೇಶ
ಪ್ರಗತಿಯಾಗಲಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT