‘ಪ್ರತಿ ಆರ್ಥಿಕ ವ್ಯವಸ್ಥೆ’ಯಾದ ಕಪ್ಪುಹಣ ಹೊರತೆಗೆಯಲು ಎಲ್ಲ ಕ್ರಮ: ಚವಾಣ್
ನವದೆಹಲಿ, ಮೇ 15– ಕಪ್ಪುಹಣವು ರಾಷ್ಟ್ರದಲ್ಲಿ ಪ್ರತಿ ಆರ್ಥಿಕ ವ್ಯವಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಕೇಂದ್ರ ಹಣಕಾಸು ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ರಾಜ್ಯಸಭೆಯಲ್ಲಿ ಒಪ್ಪಿಕೊಂಡರು.
ಕಪ್ಪುಹಣವನ್ನು ಹೊರತೆಗೆಯುವ ಬಗ್ಗೆ ಎಲ್ಲ ಹಂತಗಳಲ್ಲೂ ಹಾಗೂ ದಿಸೆಗಳಲ್ಲೂ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂದೂ ಅವರು ಹೇಳಿದರು.
ಪ್ರಶ್ನೋತ್ತರ ಕಾಲದಲ್ಲಿ ಕಪ್ಪು ಹಣ ಕುರಿತ ಪ್ರಶ್ನೆಗಳ ಸುರಿಮಳೆಗೆ ಉತ್ತರ ಕೊಡುತ್ತಿದ್ದ ಶ್ರೀ ಚವಾಣ್ ಅವರು ‘ವಾಂಛೂ ಸಮಿತಿಯು ತನ್ನ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿರುವ ನೋಟು ಚಲಾವಣೆ ರದ್ದಿನ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿಲ್ಲ’ ಎಂದರು.
ಒಡವೆ– ವಸ್ತುಗಳ ಕೊಳ್ಳುವಿಕೆಗೆ ಹೆಚ್ಚಾಗಿ ಕಪ್ಪುಹಣವನ್ನು ಬಳಸಲಾಗಿದೆಯೆಂದೂ ಆ ದಿಸೆಯಲ್ಲಿಯೇ ನಾವು ಪ್ರಯತ್ನ ನಡೆಸಬೇಕಾಗಿ ದೆಯೆಂದೂ ಅವರು ಹೇಳಿದರು.
ಆರ್ಎಸ್ಎಸ್ ನಿಷೇಧಕ್ಕೆ ಒತ್ತಾಯ
ನವದೆಹಲಿ, ಮೇ 16– ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ನಿಷೇಧಿಸುವುದಕ್ಕೆ ಈಗಿನ ಸಂಸತ್ ಅಧಿವೇಶನದಲ್ಲೇ ಮಸೂದೆಯೊಂದನ್ನು ತರುವಂತೆ ನಾನಾ ರಾಜಕೀಯ ಪಕ್ಷಗಳಿಗೆ ಸೇರಿದ ಸಂಸತ್ತಿನ 150 ಮಂದಿ ಸದಸ್ಯರು ಇಂದು ಪ್ರಧಾನಿ ಅವರನ್ನು ಒತ್ತಾಯಪಡಿಸಿದ್ದಾರೆ.
ಪ್ರಧಾನಿ ಅವರಿಗೆ ಜಂಟಿಯಾಗಿ ಬರೆದ ಪತ್ರದಲ್ಲಿ ಅವರು ‘ಇತ್ತೀಚೆಗೆ ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜಾರ್ಜ್ ರೆಡ್ಡಿ ಎಂಬುವರ ಕೊಲೆಯಾಗಿರುವ ಬಗ್ಗೆ (ಆರ್ಎಸ್ಎಸ್ ಗೂಂಡಾಗಳ ಗುಂಪೊಂದು ಕೊಲೆ ಮಾಡಿದೆಯೆಂದು ಆಪಾದಿಸಲಾಗಿದೆ) ಸಿಬಿಐನಿಂದ ತನಿಖೆ ನಡೆಯಬೇಕು ಎಂದು ಅವರು ಒತ್ತಾಯ ಪಡಿಸಿದ್ದಾರೆ.