‘ಆಹಾರ ಧಾನ್ಯ ಸಬ್ಸಿಡಿ ರದ್ದತಿಯಿಂದ ಸಮಸ್ಯೆ ಆಗದು’
ನವದೆಹಲಿ, ಜುಲೈ 7– ಆಮದು ಮಾಡಿದ ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿ ಮೊತ್ತ ವಾರ್ಷಿಕ 119 ಕೋಟಿ ರೂಪಾಯಿ ಆಗುತ್ತಿದ್ದು, ಅದನ್ನು ರದ್ದು ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಲಾರದು ಎಂದು ಹಣಕಾಸು ಇಲಾಖೆ ಅಭಿಪ್ರಾಯಪಟ್ಟಿದೆ. ಹಣಕಾಸು ಇಲಾಖೆಯ ವಕ್ತಾರ ಇಂದು ಇಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯನ್ನು ರದ್ದು ಮಾಡುವಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಇಲಾಖೆ ಪರಿಶೀಲನೆ ನಡೆಸಿದ್ದು, ಸಬ್ಸಿಡಿ ರದ್ದು ಮಾಡಿದರೆ ಧಾನ್ಯಗಳ ಬೆಲೆ ಭಾರಿ ಹೆಚ್ಚಳ ಆಗಲಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.