‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಬನ್ನಿ, ಬಡತನವ ಬುಡಮಟ್ಟ ಕೀಳಬನ್ನಿ’ ಎಂದರು ರಾಷ್ಟ್ರಕವಿ ಕುವೆಂಪು. ಆದರೆ ನಾವು ಎತ್ತ ಹೊರಟಿದ್ದೇವೆ? ಮಂದಿರ– ಮಸೀದಿ ಎಂದು ಸಾಮಾಜಿಕ ಕ್ಷೋಭೆಯನ್ನು ಉಂಟುಮಾಡುತ್ತಿದ್ದೇವೆ. ಅಷ್ಟೇ ಏಕೆ ನಮ್ಮ ಜಾನಪದವೂ ಕೂಡ ‘ಯಾವ ಗುಡಿಯಾದರೇನು? ನಿದ್ದೆ ಬಂದರೆ ಸಾಕು...’ ಎನ್ನುತ್ತದೆ. ಹಗಲೆಲ್ಲ ದುಡಿದುಬಂದ ಜೀವಕ್ಕೆ ನಿದ್ದೆ ಬಂದರೆ ಸಾಕಲ್ಲವೇ? ಅದು ಬಿಟ್ಟು ಇದು ಗುಡಿಯೋ? ಮಸೀದಿಯೋ? ಎಂಬ ಪ್ರಶ್ನೆ ಬೇಕಿಲ್ಲವಲ್ಲ? ದೇಶದಲ್ಲಿ ರೈತರ ಆತ್ಮಹತ್ಯೆ, ಯುವಕರ ನಿರುದ್ಯೋಗ ಮುಂತಾಗಿ ಹಲವು ಜ್ವಲಂತ ಸಮಸ್ಯೆಗಳಿವೆ. ಆದರೆ ಪ್ರಾಜ್ಞರೆನ್ನಿಸಿಕೊಂಡವರೇ ಅಂಥ ಸಮಸ್ಯೆಗಳನ್ನು ಮರೆಸುತ್ತಿದ್ದಾರೆ!