ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೆನ್ನೈ ಪ್ರವಾಸದಲ್ಲಿ ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಅವರು ‘ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸದಂತೆ ಕರ್ನಾಟಕಕ್ಕೆ ಬುದ್ಧಿಮಾತು ಹೇಳಿ’ ಎಂದು ಮನವಿ ಮಾಡಿದರು. ಆದರೆ ನಮ್ಮ ರಾಜ್ಯಕ್ಕೆ ಪ್ರಧಾನಿಯವರು ಎರಡು–ಮೂರು ಸಲ ಭೇಟಿ ನೀಡಿದರೂ ನಮ್ಮ ಮುಖ್ಯಮಂತ್ರಿಯಾಗಲಿ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಮಂತ್ರಿಗಳಾಗಲಿ, ಕಾವೇರಿ ವಿಷಯ ಎತ್ತಲೇ ಇಲ್ಲ.
ಕೇವಲ ಮಾಧ್ಯಮದ ಮುಂದೆ ಕಾವೇರಿ, ಮೇಕೆದಾಟು ನಮ್ಮ ಹಕ್ಕು ಎಂದು ಸಾರುವ ಮುಖ್ಯಮಂತ್ರಿಯವರು, ಈ ಯೋಜನೆಯ ಅಗತ್ಯದ ಬಗ್ಗೆ ಕೇಂದ್ರ ಮಟ್ಟದಲ್ಲಿ ಎಂದಾದರೂ ಮನದಟ್ಟು ಮಾಡಿಕೊಟ್ಟಿದ್ದಾರೆಯೇ? ಸಂಸತ್ತಿನಲ್ಲಿ ಕಾವೇರಿ ವಿಷಯದಲ್ಲಿ ಕರ್ನಾಟಕದ ಪ್ರಬಲ ಧ್ವನಿಯಾಗಿದ್ದ ದೇವೇಗೌಡರು ಮಂಕಾಗಿದ್ದಾರೆ. ಮೊನ್ನೆ ದೆಹಲಿಯಲ್ಲಿ ರೈತರ ವಿಷಯವಾಗಿ ಅವರು ನಡೆಸಿದ ಉಪವಾಸ ಸತ್ಯಾಗ್ರಹ ಕಾಟಾಚಾರ ಪ್ರಚಾರದ ತಂತ್ರದಂತೆ ಕಾಣಿಸಿತು.
ಬಿಜೆಪಿ– ಕಾಂಗ್ರೆಸ್ಸಿಗರ ಹಗ್ಗ ಜಗ್ಗಾಟದಲ್ಲಿ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಕೈತಪ್ಪಿತು. ಇಂಥ ಹಗ್ಗಜಗ್ಗಾಟ, ಪಕ್ಷ ಪ್ರತಿಷ್ಠೆಯ ರಾಜಕಾರಣ ಹೀಗೇ ಮುಂದುವರಿದರೆ ಮೇಕೆದಾಟು ಯೋಜನೆ ಕೈತಪ್ಪಿದರೂ ಆಶ್ಚರ್ಯಪಡಬೇಕಾಗಿಲ್ಲ. ಆದ್ದರಿಂದ ನಾಡಿನ ಜನಪ್ರತಿನಿಧಿಗಳು ಒಟ್ಟಾಗಿ, ರಚನಾತ್ಮಕ ನಿರ್ಧಾರಗಳ ಮೂಲಕ ಯೋಜನೆಯ ಅಗತ್ಯದ ಕುರಿತು ಕೇಂದ್ರಕ್ಕೆ ಮನದಟ್ಟು ಮಾಡುವುದು ಇಂದಿನ ತುರ್ತಾಗಿದೆ.