ಒಬ್ಬ ಉಪನ್ಯಾಸಕಿಯನ್ನು ವಂಚಿಸಿ 16.5 ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ನು ಜ್ಯೋತಿಷಿಯ ಸೋಗಿನಲ್ಲಿ ವಿದ್ಯಾರ್ಥಿಯೊಬ್ಬ ಲಪಟಾಯಿಸಿದ ವಿಚಾರ ಪತ್ರಿಕೆಯಲ್ಲಿ ಓದಿ (ಸೆ. 13) ನಿಜಕ್ಕೂ ಆಶ್ಚರ್ಯವಾಯಿತು.
ಇತ್ತೀಚೆಗಂತೂ ಕಪಟ ಕಾವಿಧಾರಿಗಳು, ಜ್ಯೋತಿಷಿಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತಾರೆ. ‘ಕೈಚಳಕ’ವನ್ನೂ ತೋರುತ್ತಿದ್ದಾರೆ. ಹಣ ಸಂಪಾ ದಿಸಲು ಇದೊಂದು ಸುಲಭ ಮಾರ್ಗವಾಗಿದೆ.
ಇಂಥವರ ಮಾತಿಗೆ ಮರುಳಾಗಿ ಮನೆ ಮಠ ಕಳೆದುಕೊಂಡವರು ಅದೆಷ್ಟೋ ಮಂದಿ! ಇವರ ಬಗ್ಗೆ ಜನ ಜಾಗೃತರಾಗಬೇಕಾಗಿದೆ. ಸರ್ಕಾರ ಕೂಡಾ ಇಂಥವರ ಬಗ್ಗೆ ಕಟ್ಟೆಚ್ಚರ ವಹಿಸಬೇಕಾಗಿದೆ. ದೃಶ್ಯ ಮಾಧ್ಯಮಗಳಲ್ಲಿ ಜ್ಯೋತಿಷಿಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿದೆ. ಅದಕ್ಕೆ ಕಡಿವಾಣ ಹಾಕುವುದು ಸಮಾಜದ ಒಳಿತಿನ ದೃಷ್ಟಿಯಿಂದ ಒಳ್ಳೆಯದು.
ಎಲ್ಲಕ್ಕೂ ಮಿಗಿಲಾಗಿ ನಾಳಿನ ಸತ್ಪ್ರಜೆಗಳನ್ನು ನಿರ್ಮಿಸಬೇಕಾದ ಬೋಧಕರೊಬ್ಬರು ವಂಚಕರ ಜಾಲಕ್ಕೆ ಸಿಲುಕಿದ್ದು ವಿಷಾದನೀಯ. ಇಂಥವರೇ ಹೀಗಾದರೆ ಅನಕ್ಷರಸ್ಥರ ಪಾಡೇನು?