ಕರ್ನಾಟಕದ 8 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವ ಹಾಗೆಯೇ ಬೆಂಗಳೂರು–ಮೈಸೂರು ಚತುಷ್ಪಥ ರಸ್ತೆಯನ್ನು ಷಟ್ಪಥ ರಸ್ತೆಯಾಗಿ ಪರಿವರ್ತಿಸುವ ಪ್ರಸ್ತಾವಕ್ಕೆ ಕೇಂದ್ರದ ಒಪ್ಪಿಗೆ ಸಿಕ್ಕಿದೆ ಎಂದು ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ.
ಇದು ಸಂತೋಷದ ವಿಚಾರ. ಆದಷ್ಟು ಶೀಘ್ರದಲ್ಲೇ ಈ ಯೋಜನೆ ಅನುಷ್ಠಾನಗೊಂಡು ಪೂರ್ಣವಾಗಲೆಂದು ಹಾರೈಸೋಣ. ಈ ಪೈಕಿ ಒಂದೆರಡು ರಸ್ತೆಗಳ ಕುರಿತು ಗೊಂದಲವಿದೆ: ಅವೆಂದರೆ–
1)ಬೆಂಗಳೂರು–ಮೈಸೂರು– ಮಡಿಕೇರಿ–ಬಂಟ್ವಾಳ (367 ಕಿ.ಮೀ.)
2)ಸಿರಗುಪ್ಪ–ಬಳ್ಳಾರಿ–ಹಿರಿಯೂರು –ಹುಳಿಯಾರ್–ಚಿಕ್ಕನಾಯಕನಹಳ್ಳಿ –ನಾಗಮಂಗಲ–ಶ್ರೀರಂಗಪಟ್ಟಣ– ಮೈಸೂರು–ನಂಜನಗೂಡು (638 ಕಿ.ಮೀ.)
ಈ ಎರಡೂ ರಸ್ತೆಗಳಲ್ಲಿ ಬೆಂಗಳೂರು–ಮೈಸೂರು ಇಲ್ಲವೇ ಶ್ರೀರಂಗಪಟ್ಟಣ–ಮೈಸೂರು ರಸ್ತೆಗಳು ಒಳಗೊಳ್ಳುವುದರಿಂದ ಇವುಗಳಿಗೆ ಪ್ರತ್ಯೇಕ ವೆಚ್ಚ ತೋರಿಸುವುದು ಸರಿಯಾಗಲಾರದು. ಒಮ್ಮೆ ಬೆಂಗಳೂರು–ಮೈಸೂರು ರಸ್ತೆ ಷಟ್ಪಥವಾದೊಡನೆಯೇ ಬೆಂಗಳೂರು–ಮೈಸೂರು ಹಾಗೂ ಶ್ರೀರಂಗಪಟ್ಟಣ–ಮೈಸೂರು ಭಾಗಗಳು ಪ್ರತ್ಯೇಕವಾಗಿ ಪರಿವರ್ತನೆಗೊಳ್ಳಬೇಕಾದ ಅಥವಾ ಮೇಲ್ದರ್ಜೆಗೇರಬೇಕಾದ ಅಗತ್ಯ ಇರುತ್ತದೆಯೇ?