ಸೆ. 27ರ `ಪ್ರಜಾವಾಣಿ~ಯಲ್ಲಿ ಪ್ರಕಟವಾದ ಡಾ. ಲಿಂಗದಹಳ್ಳಿ ಹಾಲಪ್ಪ ಅವರ `ಕನ್ನಡದ ಮಹಾತ್ಮರೂ ಹಂಡೆ ವಜೀರರೂ~ ಎಂಬ ಲೇಖನಕ್ಕೆ ವಸುಧೇಂದ್ರ ಅವರು ಹೀಗೆ ಉತ್ತರಿಸಿದ್ದಾರೆ: ನನಗೆ ಶಾಸ್ತ್ರೀಯ ಸಂಗೀತದ ಪರಿಚಯವಿಲ್ಲ.
ಆದರೆ ದಕ್ಷಿಣ ಭಾರತದ ಸಂಗೀತ ಶಾಸ್ತ್ರಜ್ಞರೆಲ್ಲ ಪುರಂದರದಾಸ `ಕರ್ನಾಟಕ ಸಂಗೀತ ಪಿತಾಮಹ~ ಎಂದು ಹೆಮ್ಮೆಯಿಂದ ಕೊಂಡಾಡಿರುವುದರಿಂದ ನಾನು ಹಾಗೆ ಹೇಳಿದೆ.ಆದರೆ ದಿವಂಗತ ಸಾ.ಕೃ. ರಾಮಚಂದ್ರರಾಯರು `ಕರ್ನಾಟಕ ಸಂಗೀತ ಶಾಸ್ತ್ರದಲ್ಲಿ ಪ್ರಸಿದ್ಧರಾದ ತ್ರಿಮೂರ್ತಿಗಳೆಂದರೆ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶಾಮಾಶಾಸ್ತ್ರಿಗಳು.
ತ್ಯಾಗರಾಜರು ಪುರಂದರ ದಾಸರನ್ನು ಉಲ್ಲೇಖಿಸಿರುವುದು ಸಂತರೆಂದು ಅಷ್ಟೆ. ಸಂಗೀತ ಶಾಸ್ತ್ರಕ್ಕೆ ಅವರ ಕೊಡುಗೆಯನ್ನು ಎಲ್ಲೂ ಪ್ರಸ್ತಾಪಿಸಿಲ್ಲ. ಉಳಿದಿಬ್ಬರು ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾಶಾಸ್ತ್ರಿಗಳು ಅವರನ್ನೆಲ್ಲಿಯೂ ಉಲ್ಲೇಖಿಸಿಲ್ಲ~ ಎಂದಿದ್ದಾರೆ.
ಕರ್ನಾಟಕ ಸಂಗೀತ ಪಿತಾಮಹ ಎಂಬ ಬಿರುದು ದಿಟವಾಗಿ ವ್ಯಾಸರಾಯ ಸ್ವಾಮಿಗಳಿಗೆ ಸಲ್ಲಬೇಕು, ಇವರನ್ನು ತಂಜಾವೂರಿನ ದೊರೆ ತುಳಜಾಜಿ (1728-1736) ತನ್ನ `ಸಂಗೀತ ಸಾರಾಮೃತ~ ಎಂಬ ಗ್ರಂಥದಲ್ಲಿ `ಸಂಗೀತ ವಿದ್ಯಾ ಸಂಪ್ರದಾಯ ಪ್ರವರ್ತಕ~ ಎಂದು ಕರೆದಿದ್ದಾನೆ. ಆದರೆ ಪುರಂದರದಾಸರನ್ನು ಹಾಗೆ ಕರೆದಿಲ್ಲ. (ಪುಟ 36, ಪ್ರಸ್ತಾವನೆ, ಪುರಂದರ ಸಾಹಿತ್ಯ ದರ್ಶನ ಸಂ. 4.)