ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಸಾವು ತೀರಾ ಅನೀರಿಕ್ಷಿತವಲ್ಲವಾದರೂ ಅತೀವ ನೋವು ತಂದ ಸಂಗತಿ.
ಕರ್ನಾಟಕ ಒಳಗೊಂಡಂತೆ ಇಡೀ ಭಾರತದ ಪ್ರಜ್ಞಾವಂತ ಬೌದ್ಧಿಕ ಲೋಕ ಸಂತಾಪ ಸೂಚಿಸುತ್ತಿರುವ ಹೊತ್ತಲ್ಲಿ ಕೆಲವು ಹಿಂದೂಪರ ಸಂಘಟನೆಗಳು ಅನಂತಮೂರ್ತಿ ಸಾವನ್ನು ಸಂಭ್ರಮಿಸುತ್ತಿರುವುದು ಹೇಸಿಗೆ ತರುವ ಸಂಗತಿ. ದೃಶ್ಯಮಾಧ್ಯಮಗಳಲ್ಲಿ ಒಂದೆಡೆ ನಾಡಿನ ಅಪರೂಪದ ಚಿಂತಕನ ಪಾರ್ಥಿವ ಶರೀರ ತರುವ ದೃಶ್ಯ ಪ್ರಸಾರವಾಗುತ್ತಿದ್ದರೆ ಇನ್ನೊಂದೆಡೆ ಬಜರಂಗದಳ ಮುಂತಾದ ಹಿಂದೂಪರ ಸಂಘಟನೆಗಳು ಪಟಾಕಿ ಸಿಡಿಸಿ ಆನಂದ ಪಡುತ್ತಿರುವ ದೃಶ್ಯ ಪ್ರಸಾರವಾಗುತ್ತಿತ್ತು. ಇದು ಅತ್ಯಂತ ಹೇಯ ಘಟನೆ. ದಂತಚೋರ ವೀರಪ್ಪನ್ ಹತನಾದಾಗಲೂ ಯಾರೂ ಹೀಗೆ ಸಾವನ್ನು ಅಪಮಾನಿಸಿರಲಿಲ್ಲ. ಅದೆಷ್ಟೋ ದೇಶದ್ರೋಹಿಗಳನ್ನು ಶೂಲಕ್ಕೇರಿಸಿದಾಗಲೂ ಜನತೆ ನಿರುಮ್ಮಳ ಉಸಿರು ಬಿಟ್ಟಿರಬಹುದೆ ಹೊರತು ಸಾವನ್ನು ಸಂಭ್ರಮಿಸಿರಲಿಲ್ಲ.
ಸಂಸ್ಕೃತಿ, ಧರ್ಮ, ದೇವರ ಬಗ್ಗೆ ಭಾವುಕವಾಗಿ ಮಾತನಾಡುವ ಹಿಂದೂ ಸಂಘಟನೆಗಳು ವ್ಯಕ್ತಿಯೊಬ್ಬರ ಸಾವಿನ ಸನ್ನಿಧಿಯಲ್ಲಿ ಮಾಡಿದ್ದೇನು? ವಿವಿಧ ವೈಚಾರಿಕ ಗುಂಪುಗಳು ನಡುವೆ ಪರಸ್ಪರ ಸೈದ್ಧಾಂತಿಕ ಭಿನ್ನತೆಗಳಿರಬಹುದು. ಅಭಿಪ್ರಾಯ ಭೇದಗಳಿರಬಹುದು. ಆದರೆ, ಕನಿಷ್ಠಮಟ್ಟದ ಮಾನವೀಯತೆ ಇಲ್ಲವಾದರೆ ಆ ದೇಶಕ್ಕೆ ಬಹುದೊಡ್ಡ ಗಂಡಾತರ ಕಾದಿದೆ ಎಂದರ್ಥ.