ನವದೆಹಲಿ : ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾದ ಕಾರಣ ಆರ್ಯನ್ ಭಾಟಿಯಾ ಮೇಲೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ತಾತ್ಕಾಲಿಕ ಅಮಾನತು ಹೇರಿದೆ.
16 ವರ್ಷದ ಆರ್ಯನ್, ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಭಾರತದ ಮೊದಲ ಟೆನಿಸ್ ಆಟಗಾರ ಆಗಿದ್ದಾರೆ.
ಹೋದ ವರ್ಷದ ಅಕ್ಟೋಬರ್ನಲ್ಲಿ ನಡೆದಿದ್ದ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್ಷಿಪ್ನ ವೇಳೆ ಆರ್ಯನ್ ಅವರಿಂದ ನಾಡಾ ಅಧಿಕಾರಿಗಳು ಮೂತ್ರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಇದರಲ್ಲಿ ನಿಷೇಧಿತ ಮದ್ದಿನ ಅಂಶ ಪತ್ತೆಯಾಗಿತ್ತು.
ಮಹಾರಾಷ್ಟ್ರದ ಆರ್ಯನ್, ಹೋದ ತಿಂಗಳು ನಡೆದಿದ್ದ ಖೇಲೊ ಇಂಡಿಯಾ ಯುವ ಕ್ರೀಡಾಕೂಟದ 17 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು.
ಹೋದ ತಿಂಗಳು ಸಂದೀಪ್ ಕೌರ್ (ಪವರ್ ಲಿಫ್ಟಿಂಗ್), ಅಂಕಿತ್ ಗೋಸಾಯ್ (ಹ್ಯಾಂಡ್ಬಾಲ್), ಜಿತು ಥಾಮಸ್ (ವಾಲಿಬಾಲ್), ಯಯಿಪಾಬ (ಕನೋಯಿಂಗ್), ವಿಶಾನ್ ಸಿಂಗ್ (ಕಯಾಕಿಂಗ್ ಮತ್ತು ಕನೋಯಿಂಗ್) ಹಾಗೂ ಶಿವಂ ಕಸಾನ (ಸೈಕ್ಲಿಂಗ್) ಅವರನ್ನೂ ನಾಡಾ, ತಾತ್ಕಾಲಿಕವಾಗಿ ಅಮಾನತು ಮಾಡಿತ್ತು.