ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭೋಪಾಲ್ | ಸಂಸ್ಕೃತ ಪಂಡಿತರಿಗೆ ಕ್ರಿಕೆಟ್: ವಿಜೇತರಿಗೆ ಅಯೋಧ್ಯೆ ಪ್ರವಾಸ 

Published 6 ಜನವರಿ 2024, 15:58 IST
Last Updated 6 ಜನವರಿ 2024, 15:58 IST
ಅಕ್ಷರ ಗಾತ್ರ

ಭೋಪಾಲ್: ಸಂಸ್ಕೃತ ಉತ್ತೇಜಿಸುವ ಉದ್ದೇಶದಿಂದ ವಾರ್ಷಿಕ ಪಂದ್ಯಾವಳಿಯ ಭಾಗವಾಗಿ ವಿಶಿಷ್ಟವಾದ ಸಾಂಪ್ರದಾಯಿಕ ಉಡುಗೆ ಧರಿಸಿದ ಮತ್ತು ಹಣೆಯ ಮೇಲೆ ನಾಮಧಾರಣೆ ಮಾಡಿದ ವೈದಿಕ ಪಂಡಿತರು ಭೋಪಾಲ್ ಕ್ರಿಕೆಟ್ ಪಿಚ್‌ನಲ್ಲಿ ಮುಖಾಮುಖಿ ಆಗುತ್ತಿದ್ದಾರೆ.  

ಪಾಶ್ಚಿಮಾತ್ಯರಿಗೆ ಅತೀಂದ್ರಿಯ ಧ್ಯಾನದ ಅಭ್ಯಾಸ ಪರಿಚಯಿಸಿದ ಮಹರ್ಷಿ ಮಹೇಶ್ ಯೋಗಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮದ ವಿಜೇತರು ಜನವರಿ 22 ರಂದು ರಾಮ ದೇವಾಲಯದ ಪ್ರತಿಷ್ಠಾಪನೆ ನಡೆಯಲಿರುವ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ರಾಜಧಾನಿಯ ಅಂಕುರ್ ಮೈದಾನದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ಪಂದ್ಯಾವಳಿ ಪ್ರಾರಂಭವಾಗಿದ್ದು, ಆಟಗಾರರು ಮತ್ತು ಅಂಪೈರ್‌ಗಳು ನಿರರ್ಗಳವಾಗಿ ಸಂಸ್ಕೃತದಲ್ಲಿ ಸಂವಹನ ನಡೆಸಿದರು.

ವೀಕ್ಷಕ ವಿವರಣೆಗಾರರು ಸಹ ಮೈದಾನದಲ್ಲಿ ಹಿಟ್ಸ್, ಮಿಸ್ ಮತ್ತು ಕ್ಯಾಚ್‌ಗಳನ್ನು ಪ್ರಾಚೀನ ಭಾಷೆಯಲ್ಲಿ ನಿರೂಪಿಸಿದ್ದಾರೆ.

ಮಹರ್ಷಿ ಮೈತ್ರಿ ಮ್ಯಾಚ್ ಕಮಿಟಿ ಸದಸ್ಯ ಅಂಕುರ್ ಪಾಂಡೆ ಪ್ರಕಾರ, ‘ವಿಜೇತ ತಂಡವನ್ನು ಜನವರಿ 22 ರ ಬಳಿಕ ಅಯೋಧ್ಯೆಗೆ ಕಳುಹಿಸಲಾಗುವುದು. ವಿಜೇತರಿಗೆ ₹21,000 ನಗದು, ರನ್ನರ್ ಅಪ್ ತಂಡಕ್ಕೆ ₹ 11,000 ನಗದು ಬಹುಮಾನ ನೀಡಲಾಗುವುದು. ಕ್ರಿಕೆಟ್ ಪಂದ್ಯಾವಳಿಯ ನಾಲ್ಕನೇ ಆವೃತ್ತಿಯಲ್ಲಿ ಭೋಪಾಲ್‌ನ ನಾಲ್ಕು ತಂಡ ಸೇರಿದಂತೆ ಒಂದು ಡಜನ್ ತಂಡಗಳು ಭಾಗವಹಿಸುತ್ತಿವೆ’ ಎಂದು ಹೇಳಿದರು.

ವೈದಿಕ ಕುಟುಂಬದಲ್ಲಿ ಸಂಸ್ಕೃತ ಮತ್ತು ಕ್ರೀಡಾ ಮನೋಭಾವ ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಮತ್ತೊಬ್ಬ ಸಂಘಟಕರು ತಿಳಿಸಿದ್ದಾರೆ.

ಬಹುಮಾನಗಳ ಹೊರತಾಗಿ, ಆಟಗಾರರಿಗೆ ವೈದಿಕ ಪುಸ್ತಕಗಳು ಮತ್ತು 100 ವರ್ಷಗಳ 'ಪಂಚಾಂಗ' ನೀಡಿ ಗೌರವಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT