ಚಂಡೀಗಡ: ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರು ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಕೆಡೆಟ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಸಬ್ ಜೂನಿಯರ್ ವಿಭಾಗದ ಸಿಂಗಲ್ಸ್, ಡಬಲ್ಸ್ ಮತ್ತು ತಂಡ ಸ್ಪರ್ಧೆಗಳಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ.
ಭಾನುವಾರ ನಡೆದ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಯಶಸ್ವಿನಿ 11–3, 15–13, 11–9, 5–11, 11–9ರಲ್ಲಿ ತಮಿಳುನಾಡಿನ ಕಾವ್ಯಶ್ರೀ ಭಾಸ್ಕರ್ ಅವರನ್ನು ಸೋಲಿಸಿದರು.
ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್ ಹೋರಾಟಗಳಲ್ಲಿ ಕಾವ್ಯಶ್ರೀ 9–11, 11–5, 14–11, 11–7, 6–11, 11–7ರಲ್ಲಿ ಕರ್ನಾಟಕದ ಅನರ್ಘ್ಯ ಮಂಜುನಾಥ್ ಎದುರೂ, ಯಶಸ್ವಿನಿ 3–11, 8–11, 13–11, 11–7, 9–11, 11–9, 11–7ರಲ್ಲಿ ಹರಿಯಾಣದ ಸುಹಾನ ಸೈನಿ ವಿರುದ್ಧವೂ ವಿಜಯಿಯಾಗಿದ್ದರು.
ಬಾಲಕಿಯರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಯಶಸ್ವಿನಿ ಮತ್ತು ಅನರ್ಘ್ಯ 9–11, 11–6, 11–8, 9–11, 11–4ರಲ್ಲಿ ದೆಹಲಿಯ ಲಕ್ಷಿತಾ ನಾರಂಗ್ ಮತ್ತು ತಮನ್ನ ಗುಲ್ಸನ್ ಅವರನ್ನು ಪರಾಭವಗೊಳಿಸಿದರು.
ಮೊದಲ ಗೇಮ್ನಲ್ಲಿ ನಿರಾಸೆ ಕಂಡ ಅನರ್ಘ್ಯ ಮತ್ತು ಯಶಸ್ವಿನಿ ನಂತರದ ಎರಡು ಗೇಮ್ಗಳಲ್ಲಿ ಗೆದ್ದು 2–1 ಮುನ್ನಡೆ ಗಳಿಸಿದರು. ನಾಲ್ಕನೇ ಗೇಮ್ನಲ್ಲಿ ಲಕ್ಷಿತಾ ಮತ್ತು ತಮನ್ನ ತಿರುಗೇಟು ನೀಡಿದರು.
ನಿರ್ಣಾಯಕ ಎನಿಸಿದ್ದ ಐದನೇ ಗೇಮ್ನಲ್ಲಿ ಕರ್ನಾಟಕದ ಜೋಡಿ ಮೋಡಿ ಮಾಡಿತು.
ಸಬ್ ಜೂನಿಯರ್ ಬಾಲಕರ ಡಬಲ್ಸ್ನಲ್ಲಿ ಕರ್ನಾಟಕದ ಸಮ್ಯಕ್ ಕಶ್ಯಪ್ ಮತ್ತು ಶ್ರೀಕಾಂತ್ ಕಶ್ಯಪ್ ಅವರು ಕಂಚಿನ ಪದಕ ಜಯಿಸಿದರು.
ಸೆಮಿಫೈನಲ್ನಲ್ಲಿ ಸಮ್ಯಕ್ ಮತ್ತು ಶ್ರೀಕಾಂತ್ 7–11, 5–11, 8–11ರಲ್ಲಿ ದೆಹಲಿಯ ಪಯಾಸ್ ಜೈನ್ ಮತ್ತು ಆದರ್ಶ್ ಚೆಟ್ರಿ ಎದುರು ಸೋತರು.
ಬಾಲಕರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮಿಳುನಾಡಿನ ವಿಶ್ವ ದೀನದಯಾಳನ್ ಅವರ ಪಾಲಾಯಿತು.
ಫೈನಲ್ನಲ್ಲಿ ವಿಶ್ವ 11–8, 11–5, 11–5, 11–2ರಲ್ಲಿ ಸೌಮ್ಯದೀಪ್ ಸರ್ಕಾರ್ ಅವರನ್ನು ಮಣಿಸಿದರು.