ನೈರೋಬಿ: ಭಾರತ ಅಥ್ಲೆಟಿಕ್ಸ್ನಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಅಂಶ ಎಂದು ಅಭಿಪ್ರಾಯಪಟ್ಟಿರುವ ವರ್ಲ್ಡ್ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅಥ್ಲೀಟ್ಗಳನ್ನು ಅಭಿನಂದಿಸಿದ್ದಾರೆ.
ಭಾರತದ ಜೂನಿಯರ್ ತಂಡದವರು 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ4x400 ಮೀಟರ್ಸ್ ರಿಲೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಭಾರತದ ಸಾಧನೆ ಗಮನಾರ್ಹ ಎಂದರು.
ಚಾಂಪಿಯನ್ಷಿಪ್ನ ಮೊದಲ ದಿನವಾದ ಬುಧವಾರ ಭಾರತದ ಭರತ್ ಎಸ್, ಪ್ರಿಯಾ ಮೋಹನ್, ಸಮ್ಮಿ ಮತ್ತು ಕಪಿಲ್ 3 ನಿಮಿಷ 20.60 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಾಂಪಿಯನ್ಷಿಪ್ ಇತಿಹಾಸದಲ್ಲಿ ದೇಶಕ್ಕೆ ಐದನೇ ಪದಕ ಗೆದ್ದುಕೊಟ್ಟಿದ್ದರು.
ಪದಕ ವಿಜೇತರೊಂದಿಗೆ ಮತ್ತು ಭಾರತದ ಇತರ ಅಥ್ಲೀಟ್ಗಳೊಂದಿಗೆ ಸಂವಾದ ನಡೆಸಿರುವ 64 ವರ್ಷದ ಸೆಬಾಸ್ಟಿಯನ್ ಅದರ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.
‘ಚಾಂಪಿಯನ್ಷಿಪ್ನಲ್ಲಿ ಭಾರತ ಉತ್ತಮ ಆರಂಭ ಕಂಡಿದೆ. ಇದನ್ನು ಮಾದರಿಯಾಗಿರಿಸಿಕೊಂಡು ಉಳಿದ ಕ್ರೀಡಾಪಟುಗಳು ಸಾಧನೆ ಮಾಡಲು ಮುಂದಾಗಬೇಕು’ ಎಂದು 1500 ಮೀಟರ್ಸ್ ಓಟದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದುಕೊಂಡಿರುವ ಸೆಬಾಸ್ಟಿಯನ್ ಸಲಹೆ ನೀಡಿದರು.
‘ಭಾರತದ ಸಾಮರ್ಥ್ಯವನ್ನು ನೋಡಿ ಖುಷಿಯಾಗಿದೆ. ಟೊಕಿಯೊದಲ್ಲಿ ದೇಶದ ಕ್ರೀಡಾಪಟುಗಳು ಮಿಂಚಿದ್ದಾರೆ. ಅಥ್ಲೆಟಿಕ್ಸ್ನಲ್ಲಿ ಈ ದೇಶಕ್ಕೆ ಉತ್ತಮ ಭವಿಷ್ಯವಿದೆ’ ಎಂದು ಅವರು ಹೇಳಿದರು.