ಚೆನ್ನೈ: ದೇಶದ ಆಟೊಮೊಬೈಲ್ ಕ್ಷೇತ್ರದಲ್ಲಿ ಹಲವು ಪ್ರಥಮಗಳಿಗೆ ನಾಂದಿ ಹಾಡಿರುವ ಅಶೋಕ್ ಲೇಲ್ಯಾಂಡ್ನ ಹೊಸ ವಾಹನಗಳ ಪ್ರದರ್ಶನವನ್ನೊಳಗೊಂಡ ಜಾಗತಿಕ ಸಮಾವೇಶ ಚೆನ್ನೈನ ವ್ಯಾಪಾರ ಕೇಂದ್ರದಲ್ಲಿ ಶುಕ್ರವಾರ ನಡೆಯಿತು.
ಬಿಎಸ್4 ಎಂಜಿನ್ಗೆಂದೇ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಇಂಟೆಲಿಜೆಂಟ್ ಎಗ್ಸಾಸ್ಟ್ ಗ್ಯಾಸ್ ರಿಸರ್ಕ್ಯೂಲೇಷನ್ (ಐಇಜಿಆರ್)’ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾದ ಟ್ರಕ್, ಬಸ್, ಸಿಮ್ಯುಲೇಟರ್ ಮತ್ತಿತರ 30 ವಾಹನಗಳನ್ನು ಸಮಾವೇಶದಲ್ಲಿ ಪ್ರದರ್ಶಿಸಲಾಯಿತು.
ಮಾಲಿನ್ಯ ತಡೆಗೆ ಪೂರಕ: ‘ಐಇಜಿಆರ್ ತಂತ್ರಜ್ಞಾನ ಬಳಕೆಯಿಂದ ವಾಯುಮಾಲಿನ್ಯ ತಡೆಗಟ್ಟಬಹುದಾಗಿದೆ. ಅಲ್ಲದೆ, ವಾಹನಗಳ ಇಂಧನ ಬಳಕೆಯ ದಕ್ಷತೆ ಹೆಚ್ಚಲಿದೆ’ ಎಂದು ಅಶೋಕ್ ಲೇಲ್ಯಾಂಡ್ನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕೆ. ದಾಸರಿ ಹೇಳಿದರು.
ವಾಹನ ದುರಸ್ತಿಗೆ ತತ್ಕಾಲ್: ‘ಗ್ರಾಹಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿ 75 ಕಿ.ಮೀ. ವ್ಯಾಪ್ತಿಗೊಂದರಂತೆ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ‘ತತ್ಕಾಲ್’ ಸೇವೆಯನ್ನೂ ನೀಡಲಾಗುತ್ತಿದೆ. ಈ ಸೇವೆಯ ಅನ್ವಯ, ವಾಹನ ಕೆಟ್ಟು ನಿಂತ ಬಗ್ಗೆ ಕರೆ ಸ್ವೀಕರಿಸಿದ ನಾಲ್ಕು ಗಂಟೆಗಳ ಒಳಗಾಗಿ ಗ್ರಾಹಕರ ಬಳಿ ತಲುಪಿ 48 ಗಂಟೆಗಳ ಒಳಗಾಗಿ ವಾಹನ ದುರಸ್ತಿ ಮಾಡಿಕೊಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
ಸೇನಾ ವಾಹನಗಳ ತಯಾರಿಕೆಯಲ್ಲೂ ಕಂಪೆನಿ ಮುಂಚೂಣಿಯಲ್ಲಿದ್ದು, ಆಫ್ರಿಕಾದ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳಿಗೂ ಸೇನಾ ವಾಹನಗಳ ರಫ್ತು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
2010ರಲ್ಲೇ ಕಂಪೆನಿಯು ಬಿಎಸ್4 ಎಂಜಿನ್ ಅಭಿವೃದ್ಧಿಪಡಿಸಿತ್ತು. ಆದರೆ, ಆಗ ಮಾರುಕಟ್ಟೆಯಲ್ಲಿ ಅದಕ್ಕೆ ಬೇಡಿಕೆ ಇರಲಿಲ್ಲ. ಈಗ ಸುಪ್ರೀಂಕೋರ್ಟ್ ಆದೇಶದ ನಂತರ ಅದಕ್ಕೆ ಬೇಡಿಕೆ ಬಂದಿದೆ. ಅದನ್ನು ಪೂರೈಸಲು ಕಂಪೆನಿ ಸಮರ್ಥವಾಗಿದೆ ಎಂದು ಅವರು ಹೇಳಿದರು.
ಏಪ್ರಿಲ್ 24ರವರೆಗೆ ವಾಹನ ಪ್ರದರ್ಶನ ಮೇಳ ನಡೆಯಲಿದೆ.
(ಸಂಸ್ಥೆಯ ಆಹ್ವಾನ ಮೇರೆಗೆ ವರದಿಗಾರ ಚೆನ್ನೈಗೆ ತೆರಳಿದ್ದರು)
ಪ್ರದರ್ಶನದಲ್ಲಿದ್ದ ವಾಹನಗಳು
* ಕ್ಯಾಪ್ಟನ್ 3718/ಬಿಎಸ್4, (ಕಂಟೇನರ್ ಸಹಿತ ಟ್ರಕ್)
* ಸನ್ಶೈನ್ 8.1 ಎಂ ಶಾಲಾ ವಾಹನ (ಬಸ್)
*ಜನ್ಬಸ್ ಎಲ್ಎಚ್ಡಿ (ಬಸ್)
* ಎಂಐಟಿಆರ್ 32 ಸೀಟರ್ (ಬಸ್)
*ಕ್ವಿಕ್ ಸರ್ವೀಸ್ ಬೈಕ್ (ಬೈಕ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.