ನಾರ್ತ್ ಸೌಂಡ್, ಆ್ಯಂಟಿಗಾ (ಪಿಟಿಐ): ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಸವಾಲಿಗೆ ಸಜ್ಜಾಗಿದ್ದೇವೆ. ಹೊಸ ಸವಾಲನ್ನು ಎದುರಿಸಲು ಸಿದ್ಧಗೊಂಡಿದ್ದೇವೆ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ ಹೇಳಿ ದ್ದಾರೆ.
‘ಇಲ್ಲಿನ ಪಿಚ್ ನೋಡಿ ಪರಿಶೀಲಿಸಿ ದ್ದೇವೆ. ಅಭ್ಯಾಸ ಪಂದ್ಯಗಳಿಂದಲೂ ಹಲವು ವಿಷಯ ತಿಳಿದುಕೊಂಡಿದ್ದೇವೆ. ಅಂದುಕೊಂಡ ಯೋಜನೆಗಳನ್ನು ಕಾರ್ಯಗತಗೊಳಿಸಿ ಸರಣಿಯಲ್ಲಿ ಯಶಸ್ಸು ಪಡೆಯುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾದ ಬಳಿಕ ಮೊದಲ ಬಾರಿಗೆ ಇಲ್ಲಿಗೆ ಬಂದು ಆಡುತ್ತಿದ್ದಾರೆ. ಕೆರಿಬಿಯನ್ ನಾಡಿನ ತಂಡ 2013ರಲ್ಲಿ ಸರಣಿ ಆಡಲು ಭಾರತಕ್ಕೆ ಬಂದಿತ್ತಾದರೂ ಸರಣಿ ಪೂರ್ಣಗೊಳ್ಳುವ ಮುನ್ನವೇ ತವರಿಗೆ ವಾಪಸ್ಸಾಗಿತ್ತು. ವಿಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವೆ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಈ ಎಲ್ಲಾ ಘಟನೆಗಳು ನಡೆದ ಬಳಿಕ ಆಯೋಜನೆಯಾಗಿರುವ ಮೊದಲ ಸರಣಿ ಇದಾಗಿದೆ.