ಶ್ರೀನಗರ: ‘ಭಯೋತ್ಪಾದನೆಯೇ ಕಾಶ್ಮೀರದ ಬಹುದೊಡ್ಡ ಸಮಸ್ಯೆ.ಕಾಶ್ಮೀರದಲ್ಲಿ ಸತ್ತು ಹೋಗಿರುವ ಭಯೋತ್ಪಾದಕರಲ್ಲಿ ಹೆಚ್ಚಿನವರು ವಿದೇಶದಿಂದ ಬಂದವರು. ನಿಜ ಹೇಳಬೇಕೆಂದರೆ ಅವರೆಲ್ಲರೂ ಪಾಕಿಸ್ತಾನದವರು. ಇದೊಂದು ಅಂತರರಾಷ್ಟ್ರೀಯ ಸಮಸ್ಯೆ. ಎಲ್ಲ ಪ್ರತಿಭಟನೆಗಳು ಭಯೋತ್ಪಾದನೆಯ ವಿರುದ್ಧ ನಡೆಯಬೇಕು’ ಎಂದು ಕಾಶ್ಮೀರಕ್ಕೆ ಖಾಸಗಿ ಭೇಟಿ ನೀಡಿದ್ದ ಐರೋಪ್ಯ ಒಕ್ಕೂಟದ ಸಂಸದರ ನಿಯೋಗವು ಹೇಳಿದೆ.
ಸೇನೆ ಮತ್ತು ಪೊಲೀಸರು ನೀಡಿದ ಮಾಹಿತಿಯ ಆಧಾರದಲ್ಲಿ ಈ ನಿರ್ಧಾರಕ್ಕೆ ಬಂದುದಾಗಿ ನಿಯೋಗವು ಹೇಳಿದೆ.
‘ವಿಶೇಷಾಧಿಕಾರ ರದ್ದತಿಯ ವಿಚಾರ ಮಾತನಾಡಿದರೆ ಅದು ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪವಾಗುತ್ತದೆ. ಇಡೀ ಜಗತ್ತನ್ನು ಕಾಡುತ್ತಿರುವ ಭಯೋತ್ಪಾದನೆ ನಮ್ಮ ಕಾಳಜಿಯ ವಿಷಯ. ಹಾಗಾಗಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜತೆ ನಿಲ್ಲುತ್ತೇವೆ’ ಎಂದು ನಿಯೋಗವು ಹೇಳಿದೆ.