ನವದೆಹಲಿ: ಹೆದ್ದಾರಿ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆಯಲು ಲಂಚ ನೀಡಿದ ಮತ್ತು ಸ್ವೀಕರಿಸಿದ ಆರೋಪದಲ್ಲಿ ಅಮೆರಿಕದ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್ಎಚ್ಎಐ) ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಭಾರತದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆಯಲು ಅಮೆರಿಕದ ಸಿಡಿಎಂ ಸ್ಮಿತ್ ಕಂಪನಿ 2011ರಿಂದ 2016ರ ಅವಧಿಯಲ್ಲಿ ಎನ್ಎಚ್ಎಐ ಅಧಿಕಾರಿಗಳಿಗೆ ಅಂದಾಜು ₹7.50 ಕೋಟಿ ಲಂಚ ನೀಡಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಸಿಡಿಎಂ ಸ್ಮಿತ್ ಇಂಡಿಯಾ ಹಣಕಾಸು ವಿಭಾಗದ ನಿರ್ದೇಶಕರಾಗಿದ್ದ ಗೋಪಕುಮಾರ್ ಮತ್ತು ಇತರ ಅಧಿಕಾರಿಗಳು, ಆರ್.ವಿ. ಇನ್ಫ್ರಾ ಸಲ್ಯೂಷನ್ಸ್ ಮ್ಯಾನೇಜರ್ ಆಗಿದ್ದ ಎಸ್. ಕೃಷ್ಣಮೂರ್ತಿ ಹಾಗೂ ಎನ್ಎಚ್ಎಐ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಸಿಡಿಎಂ ಸ್ಮಿತ್ ಇಂಡಿಯಾ ಕಂಪನಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದೆ.