ಬೆಳಗಾವಿ: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ರೈತರು ಹೆಸರು ನೋಂದಣಿ ಮಾಡಿಸುವಾಗ ಯಾವುದೇ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಆಧಾರ್ ಕಾರ್ಡ್, ಆರ್ಟಿಸಿ (ಪಹಣಿ), ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ರೈತರು ಹೆಸರು ನೋಂದಣಿ ಮಾಡಿಸಬಹುದು ಎಂದಿದ್ದಾರೆ.
ಕೆಲವೆಡೆ ಅನಗತ್ಯ ದಾಖಲೆಗಳನ್ನು ಕೇಳಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಸರ್ಕಾರ ನಿಗದಿಪಡಿಸಿದ ದಾಖಲೆ ಹೊರತುಪಡಿಸಿ ಬೇರೆ ಕೇಳಿದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಬೆಂಬಲ ಬೆಲೆಯಡಿ ಭತ್ತ ಮಾರಾಟ ಮಾಡಲು ಮುಂದಾಗುವ ರೈತರಿಗೆ ಹಲವಾರು ದಾಖಲೆಗಳನ್ನು ಕೇಳುವುದರಿಂದ ಪರದಾಡುವಂತಾಗಿದೆ ಎಂದು ವಿಧಾನಸಭೆಯಲ್ಲಿ ಶಾಸಕರು ಸರ್ಕಾರದ ಗಮನ ಸೆಳೆದಿದ್ದರು.
ದಾಖಲೆ ಕೇಳುತ್ತಿರುವುದರಿಂದ ಆಗುವ ತೊಂದರೆ ಖಂಡಿಸಿ ರೈತರು ಹಲವೆಡೆ ಪ್ರತಿಭಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.