ಮುಂಬೈ: ಆರ್ಬಿಐ ಗುರುವಾರ ನಡೆಸಿದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ಷೇರುಪೇಟೆಗಳಲ್ಲಿ ಸೂಚ್ಯಂಕ ದಿಢೀರ್ ಏರಿಕೆ ದಾಖಲಿಸಿದವು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್ಇ) 577 ಅಂಶ ಜಿಗಿತ ಕಂಡು 33,596 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.
ಮಾರ್ಚ್ 12ರ ನಂತರ (611 ಅಂಶ) ದಿನದ ವಹಿವಾಟಿನಲ್ಲಿ ಸೂಚ್ಯಂಕದ ಗರಿಷ್ಠ ಏರಿಕೆ ಇದಾಗಿದೆ. ಬುಧವಾರದ ವಹಿವಾಟಿನಲ್ಲಿ 351 ಅಂಶ ನಷ್ಟ ಕಂಡಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 10,332 ಮತ್ತು 10,227 ಗರಿಷ್ಠ, ಕನಿಷ್ಠ ಅಂಶಗಳಲ್ಲಿ ಏರಿಳಿತ ಕಾಣುವ ಮೂಲಕ ಅಂತಿಮವಾಗಿ 197 ಅಂಶಗಳ ಗಳಿಕೆಯೊಂದಿಗೆ 10,325 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
‘ಜಾಗತಿಕ ವ್ಯಾಪಾರ ಬಿಕ್ಕಟ್ಟಿನ ಶಮನ ಮತ್ತು ಆರ್ಬಿಐ ನಿರ್ಧಾರದಿಂದಾಗಿ ಷೇರುಪೇಟೆ ಚೇತರಿಕೆ ಕಂಡಿತು. ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತ ಮತ್ತು ಫೆಡರಲ್ ರಿಸರ್ವ್ ಬಡ್ಡಿದರಗಳು ಸದ್ಯದ ಮಟ್ಟಿಗೆ ದೇಶದಲ್ಲಿ ಬಡ್ಡಿ ದರ ಏರಿಕೆ ಆಗದಂತೆ ತಡೆಯಲಿವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಜಪಾನ್ನ ನಿಕೇಯ್ ಸೂಚ್ಯಂಕ ಶೇ 1.53, ಸಿಂಗಪುರ ಶೇ 1.97 ರಷ್ಟು ಏರಿಕೆ ಕಂಡಿವೆ. ಸಾರ್ವತ್ರಿಕ ರಜೆಯ ಕಾರಣ ಹಾಂಕಾಂಗ್ ಮತ್ತು ಶಾಂಘೈ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಯಲಿಲ್ಲ.
ಯುರೋಪ್ ವಲಯದಲ್ಲಿ ಫ್ರಾಂಕ್ಫರ್ಟ್ ಡಿಎಎಕ್ಸ್ ಶೇ 1.80, ಪ್ಯಾರಿಸ್ ಸಿಎಸಿ ಶೇ 1.73 ಮತ್ತು ಲಂಡನ್ ಎಫ್ಟಿಎಸ್ಇ ಶೇ 1.29ರವರೆಗೂ ಏರಿಕೆ ಕಂಡಿವೆ.