ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಮತ್ತು ತುಳು ಅಪ್ಪನ ಪ್ರಾಣ!

Last Updated 19 ಜೂನ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ಅಪ್ಪ ಮಹಾಪುಸ್ತಕ ಪ್ರೇಮಿ. ಜಗತ್ತಿನ ಎಲ್ಲ ದೇಶಗಳಿಂದ ಪುಸ್ತಕಗಳನ್ನು ತರಿಸಿ ಇಬ್ಬರೂ ಮಕ್ಕಳಿಗೆ ಕೊಡುತ್ತಿದ್ದರು. ನನ್ನ ಅಣ್ಣ ಸಂದೀಪ್‌ ಸಂಗೀತದ ಜೊತೆಗೆ ಸಖ್ಯ ಮಾಡಿಕೊಂಡರೆ, ನಾನು ಪುಸ್ತಕಗಳಲ್ಲಿ ಮುಳುಗುತ್ತಿದ್ದೆ. ಮಕ್ಕಳನ್ನು ಬೆಳೆಸುವಾಗ ಅವರು ಗಂಡು–ಹೆಣ್ಣು ಎನ್ನುವ ವ್ಯತ್ಯಾಸ ಮಾಡಲಿಲ್ಲ.

ನಾವು ಯಾವುದೇ ಕೆಲಸಗಳನ್ನು ಕೈಗೆತ್ತಿಕೊಂಡರೂ ಅದನ್ನು ಅರ್ಧದಲ್ಲಿ ನಿಲ್ಲಿಸಬಾರದು ಎನ್ನುವುದನ್ನು ಹೇಳಿಕೊಟ್ಟದ್ದು ಅಪ್ಪ. ಇವತ್ತು ನಾನು ಆನೆಗಳ ಜೊತೆಗೆ ಬದುಕು ಕಟ್ಟಿಕೊಂಡಿದ್ದರೆ ಅದಕ್ಕೆ ಧೈರ್ಯ ಕೊಟ್ಟದ್ದೇ ಅವರು.

ಹಾಗೆಂದು ನನ್ನ ಈ ಹುಚ್ಚು ಅವರಿಗೆ ಇಷ್ಟವಿತ್ತು ಎಂದಲ್ಲ. ಹೆಣ್ಣುಮಗಳು ಕಾಡು ಮೇಡುಗಳಲ್ಲಿ, ಕಲ್ಲು ಮಣ್ಣುನಲ್ಲಿ ಬಿದ್ದು ಅಷ್ಟೊಂದು ಕಷ್ಟ ಪಡುವುದೇಕೆ ಎಂದು ಅವರು ಜಗಳ ಮಾಡಿದ್ದುಂಟು. ಆದರೆ ಆನೆಗಳಿಗೆ ಸಂಬಂಧಿಸಿ ಆಸಕ್ತಿಯ ಅರಿವಾದ ಬಳಿಕ ಅವರು ನನ್ನ ಬೆಂಬಲಕ್ಕೆ ನಿಂತರು. ಸಂಬಂಧಿಕರು ಯಾರಾದರೂ ಮಗಳೇನು ಮಾಡುತ್ತಾಳೆ ಎಂದು ವಿಚಾರಿಸಿದರೆ ನಗುತ್ತಾ ‘ಆನೆ ಸಾಕುತ್ತಿದ್ದಾಳೆ’ ಎನ್ನುತ್ತಿದ್ದರು. ಮನೆಯಲ್ಲಿ ಎಷ್ಟೋ ಸಲ ‘ಇಲ್ಲೇ ಇದ್ದು ಈ ಬಿಳಿಯಾನೆಯನ್ನು ನೋಡಿಕೊಳ್ಳಲು ನಿನಗೆ ಆಗಲ್ಲ, ಅಲ್ಲೆಲ್ಲೋ ಹೋಗಿ ಆ ಕರಿಯಾನೆಗಳನ್ನು ನೋಡಿಕೊಳ್ಳುತ್ತಿದ್ದೀಯಾ’ ಎಂದು ನನ್ನ ಮೇಲೆ ಹುಸಿಕೋಪ ಪ್ರದರ್ಶಿಸುತ್ತಿದ್ದರು. ‘ಅಯ್ಯೋ ನಿನ್ನಂಥ ಬಿಳಿಯಾನೆಯನ್ನು ಸಾಕೋದು ನನಗಾಗಲ್ಲಪ್ಪ, ಅದಕ್ಕಿಂತ ಈ ಕರಿಯಾನೆಗಳ ಸಹವಾಸವೇ ವಾಸಿ’ ಎಂದು ನಾನೂ ನಕ್ಕು ಉತ್ತರಿಸುತ್ತಿದ್ದೆ.

ತಿರುಗಾಟ ಅವರ ನೆಚ್ಚಿನ ಹವ್ಯಾಸವಾಗಿತ್ತು. ನಾನು ಮತ್ತು ಅಣ್ಣ ಸಂದೀಪ್‌ (ಚೌಟ) ಘಾನಾದಲ್ಲಿ ಹುಟ್ಟಿದ್ದು. ಅಪ್ಪ ಬ್ರಿಟಿಷ್‌ ಇಂಡಿಯಾ ಇನ್ಶೂರೆನ್ಸ್‌ ಕಂಪನಿಯ ದೊಡ್ಡ ಹುದ್ದೆಯಲ್ಲಿದ್ದರು. ಆಫ್ರಿಕಾ, ಏಷ್ಯಾ,ಯೂರೋಪ್‌ ಮುಂತಾದ ಖಂಡಗಳಲ್ಲಿ ಸುತ್ತಾಡಿ ಹಲವು ದೇಶಗಳನ್ನು ನಮಗೆ ತೋರಿಸಿದ್ದರು. ಮಂಜೇಶ್ವರದಲ್ಲಿ ಇದ್ದ ಅಜ್ಜನ ಮನೆಯ ದೊಡ್ಡ ಚಾವಡಿಯಲ್ಲಿ ಯಕ್ಷಗಾನ, ಭೂತಕೋಲಗಳನ್ನು ತೋರಿಸಿದ್ದರು. ಮುಂಬೈಯಿಂದ ಮಂಗಳೂರಿಗೆ ನಮ್ಮನ್ನು ಕಾರಿನಲ್ಲಿ ಕಳುಹಿಸುತ್ತಿದ್ದರು–ಊರು ಸುತ್ತಾಡಿಕೊಂಡು ಹೋಗಿ ಅಂತ. ಏನೇ ವಿಷಯಗಳಿದ್ದರೂ ಅವರ ಬಳಿ ಉತ್ತರ ಸಿಗುತ್ತಿತ್ತು. ಏಕೆಂದರೆ ಅವರಿಗೂ ಪುಸ್ತಕದ ಹುಚ್ಚು. ಅವರಿಂದಾಗಿ ನಾನು ಇಂಗ್ಲಿಷ್‌ನಲ್ಲಿ ಕಾರ್ನಾಡ್‌, ಭೈರಪ್ಪ, ಕುವೆಂಪು, ಕಾರಂತ, ಅಕ್ಕಮಹಾದೇವಿ, ಬಸವಣ್ಣ ಮುಂತಾದವರನ್ನೆಲ್ಲ ಓದಿದೆ. ನನ್ನಪ್ಪ ನನ್ನ ಪಾಲಿಗೆ ಜೀವಂತ ಎನ್‌ಸೈಕ್ಲೊಪಿಡಿಯಾ ಇದ್ದಂತಿದ್ದರು.

ಮಕ್ಕಳ ಜೊತೆಗೆ ಎಷ್ಟು ಸಲಿಗೆಯಿಂದ ಇರುತ್ತಿದ್ದರೋ ಮನೆಯಲ್ಲಿ ಅಷ್ಟೇ ಸ್ಟ್ರಿಕ್ಟ್‌. ಆದರೆ ತುಂಬ ಅಂತಃಕರಣದ ಮನುಷ್ಯ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ. ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಅವರದ್ದೇ ಆದ ದೃಷ್ಟಿಕೋನವೊಂದಿತ್ತು. ಅವರು ನಿರೀಶ್ವರವಾದಿ ಆಗಿರೋದಕ್ಕೂ ಒಂದು ಕಾರಣವಿದೆ. ಅದು ತೀರಾ ವೈಯಕ್ತಿಕ, ಇಲ್ಲಿ ಬೇಡ. ಧಾರ್ಮಿಕ ವಿಚಾರಗಳಿಗೆ ದುಂದುವೆಚ್ಚ ಮಾಡುವುದನ್ನು ಒಪ್ಪುತ್ತಿರಲಿಲ್ಲ. ಆದರೆ ಯಕ್ಷಗಾನ, ನಾಟಕ, ಭೂತಕೋಲಗಳಿಗೆ ಕೈಬಿಚ್ಚಿ ಖರ್ಚು ಮಾಡುತ್ತಿದ್ದರು. ತುಳು, ಕನ್ನಡದ ಬಗ್ಗೆ ವಿಶೇಷ ಮಮತೆಯಿತ್ತು. ಮಾತೃಭಾಷೆಯನ್ನು ಯಾರೂ ಬಿಟ್ಟುಕೊಡಬಾರದು ಎನ್ನುತ್ತಿದ್ದರು.

ಆಫ್ರಿಕಾದಲ್ಲಿ ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ಕೈತುಂಬ ದುಡಿದರು. ಕಾರುಗಳು, ವಾಚ್‌ಗಳು, ಹುಲಿಗಳು– ಹೀಗೆ ಅವರಿಗೆ ಹಲವು ಹುಚ್ಚುಗಳಿದ್ದವು. ಆದರೆ ಕೈತುಂಬ ದುಡಿದ ನಂತರ ಊರಿಗೆ ಬಂದು ನೆಲೆಸಿ ಇಲ್ಲಿಯ ಕಲೆ, ಸಂಸ್ಕೃತಿಗಳ ಪೋಷಕರೆನ್ನಿಸಿಕೊಂಡರು. ನಾಟಕಗಳದ್ದಂತೂ ವಿಪರೀತ ಹುಚ್ಚಿತ್ತು. ಬಹುಶಃ ಅವರು ಜೀವನ ಚರಿತ್ರೆ ಬರೆದಿದ್ದರೆ ಬರಬಹುದಾಗಿದ್ದ ಹಲವು ಪಾತ್ರಗಳು ಅವರ ನಾಟಕಗಳಲ್ಲಿ ಬಂದಿದೆ ಅಂತ ನನಗನ್ನಿಸುತ್ತೆ.

ದೊಡ್ಡ ಕುಟುಂಬದ ಸೋದರ–ಸೋದರಿಯರ ಎಲ್ಲ ಮಕ್ಕಳನ್ನೂ ಅವರು ಪ್ರೀತಿಯಿಂದ ಸಲಹಿದರು. ‘ನನಗೆ ಅಪ್ಪ ಕೊಟ್ಟದ್ದು ಚೌಟ ಎಂಬ ಹೆಸರು ಮಾತ್ರ. ಉಳಿದ ಎಲ್ಲವನ್ನೂ ನಾನೇ ದುಡಿದು ಗಳಿಸಿದೆ. ನೀವೂ ಗಳಿಸಿ, ಆದರೆ ಉಳಿದವರ ಜೊತೆಗೆ ಹಂಚಿ ತಿನ್ನಿ’ ಎಂದು ಸದಾ ಹೇಳುತ್ತಿದ್ದರು. ಕೃಷಿ ಅವರ ಹುಚ್ಚಾಗಿತ್ತು. ಕೊನೆಯ ದಿನಗಳಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆಗೆ ಹುಟ್ಟೂರಿಗೆ ಹೋಗಿ ಅಲ್ಲೇ ಕೊನೆಯುಸಿರು ಎಳೆಯಬೇಕೆಂಬ ಆಸೆ ಅವರಿಗಿತ್ತು, ಅದಾಗಲಿಲ್ಲ. ಕೊನೆಯ ಕ್ಷಣದವರೆಗೂ ಅವರ ಬುದ್ಧಿ ಚುರುಕಾಗಿತ್ತು. ಬೆಳಿಗ್ಗೆಯೂ ಅವರ ಜೊತೆಗೆ ನಾನು ಫೋನಲ್ಲಿ ಮಾತನಾಡಿದ್ದೆ.

(ಪ್ರಜ್ಞಾ ಚೌಟ ಲಂಡನ್‌ ವಿಶ್ವವಿದ್ಯಾಲಯದಿಂದಮಾನವಶಾಸ್ತ್ರದಲ್ಲಿ ಮಾಸ್ಟರ್ಸ್‌ ಪದವೀಧರೆ. ಏಷ್ಯಾದ ಅಪರೂಪದ ಆನೆ ಮಾವುತರು.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT