ಮತವು ಆಯಾಧರ್ಮಗಳಲ್ಲಿ ವಾಡಿಕೆಯಗಿರುವ ಧರ್ಮ ಸಂಬಂಧವಾದ ಆಚಾರ, ಸಂಪ್ರದಾಯಗಳು. ಅವುಗಳು ಆಲೋಚನೆ ಸರ್ವಸಮಾನತೆಯ, ಸಕಲ ಮಾನವರ ಶ್ರೇಯೋಭಿವೃದ್ಧಿಯ ಆಶಯವನ್ನು ಹೊಂದಿರಬೇಕು. ಧರ್ಮವೆಂದರೆ ನ್ಯಾಯ, ನೀತಿ, ದಯೆ, ಕರುಣೆ, ಕೃಪೆಯಿಂದ ಕೂಡಿದ್ದು. ಆದರೆ ಮತವು ಅಸಮಾನತೆಯನ್ನು ಬಿತ್ತಿ ಬೆಳೆಯುವ ಅಸ್ಪೃಶ್ಯತೆಯನ್ನು ಆಚರಿಸುವ, ತನ್ನೊಡನೆ ಬದುಕಿ ಬಾಳುವವರನ್ನು ಪ್ರತ್ಯೇಕ ಜೀವಿಗಳಂತೆ ಕಂಡು ವರ್ತಿಸುವ ಕ್ಷುಲ್ಲಕತೆಯನ್ನು ಒಳಗೊಂಡಿದ್ದಾಗ; ಮೌಢ್ಯ ಆಧಾರರಹಿತ ನಂಬಿಕೆಗಳು, ಅಂಧಶ್ರದ್ಧೆಯ ಕರ್ಕಶ ಪಾಪಮಯ ವರ್ತನೆಗಳಿಂದ ಕೂಡಿದ್ದಾಗ ಅಂತಹ ಮತವನ್ನು ಕುವೆಂಪು ‘ಮತರಾಹು’ ಎಂದು ಕರೆದಿದ್ದಾರೆ. ನವಗ್ರಹಗಳಲ್ಲಿ ರಾಹು ಕೆಡುಕಿನ ಸಂಕೇತ. ಅಂತಹ ‘ಮತರಾಹು’ಗಳ ಬಗ್ಗೆ ಎಚ್ಚರದಿಂದಿರಬೇಕೆಂಬ ಚಿಂತನೆಯನ್ನು ತಮ್ಮ ಸಾಹಿತ್ಯದಲ್ಲಿ ನೀಡಿದ್ದಾರೆ. ಅದನ್ನು ಹೀಗೆ ಕಾವ್ಯದಲ್ಲಿ ಪ್ರಕಟಪಡಿಸಿದ್ದಾರೆ.