‘ಮುಕ್ತಛಂದ’ದ ಪ್ರವಾಸಪುಟದಲ್ಲಿನ ಬರಹಗಳು ನನ್ನಂತಹ ಅಲೆಮಾರಿಗಳ ಕನಸುಗಳಿಗೆ ನೀರೆರೆಯುವಂತಿವೆ. ಪ್ರಜ್ಞಾ ಶಾಸ್ತ್ರಿ ಅವರ ನೈರೋಬಿ ಕುರಿತ ಕಥನ ತನ್ನ ಒಳನೋಟಗಳಿಂದ ಇಷ್ಟವಾಯಿತು. ಮೇಲ್ನೋಟಕ್ಕೆ ಕಾಣಿಸುವ ವಿವರಗಳ ಜೊತೆಗೆ, ಲೇಖಕಿಯ ಒಳನೋಟಗಳೂ ಸೇರಿಕೊಂಡು ಸಹೃದಯರನ್ನು ನೈರೋಬಿ ಪ್ರವಾಸಕ್ಕೆ ಉತ್ತೇಜಿಸುವಂತಿವೆ.
–ಎಲ್.ಆರ್. ಚಂದ್ರಶೇಖರ, ಬೆಂಗಳೂರು
*
ಯುವ ಕಲಾವಿದರಿಗೆ ಪ್ರೇರಣೆ
‘ಎಸ್.ಪಿ. ವರದರಾಜ್ ಪ್ರಶಸ್ತಿ’ ನೆಪದಲ್ಲಿ ಅಶೋಕ ಬಸ್ತಿ ಅವರನ್ನು ಪರಿಚಯಿಸಿರುವುದು (ಲೇ: ಗುಡಿಹಳ್ಳಿ ನಾಗರಾಜ್, ಫೆ. 12) ಅರ್ಥಪೂರ್ಣ. ಅಶೋಕ್ ಅವರಂಥ ಪ್ರತಿಭಾವಂತರು ದಶಕಗಳ ಸಾಧನೆಯ ನಂತರವೂ ಮುಖ್ಯವಾಹಿನಿಯ ಕಣ್ಣಿಗೆ ಕಾಣಿಸಿಕೊಳ್ಳುವುದು ಅಪರೂಪ. ವಿರಳ ಕಲಾವಿದನ ಕುರಿತ ‘ಮುಕ್ತಛಂದ’ದ ಬರಹ ಯುವ ರಂಗಕಲಾವಿದರಿಗೆ ಪ್ರೇರಣೆ ನೀಡುವಂತಿದೆ. ಅಂತೆಯೇ ಲಕ್ಷ್ಮೀಶ ತೋಳ್ಪಾಡಿ ಅವರ ‘ಭಾರತಯಾತ್ರೆ’ ಹಾಗೂ ಕೃಪಾಕರ ಸೇನಾನಿ ಅವರ ‘ಅವ್ಯಕ್ತ ಭಾರತ’ ಅಂಕಣಗಳು ‘ಮುಕ್ತಛಂದ’ಕ್ಕೆ ವಿಶೇಷ ಶೋಭೆ ನೀಡಿರುವ ಗರಿಗಳಾಗಿವೆ.
–ಕೆ. ಚಂದ್ರಕಲಾ, ದೊಡ್ಡಬಳ್ಳಾಪುರ