ಗಂಗೆಯ ತಟ, ದೋಣಿಗಳು, ದೇವಾಲಯಗಳ ಗೋಪುರಗಳು, ಯಾತ್ರಿಗಳಿಗಾಗಿ ಕಾಯುತ್ತಿರುವ ದೋಣಿಗಳು, ನೀಲಾಕಾಶ, ಈಗಷ್ಟೆ ಅಂತ್ಯಕ್ರಿಯೆ ಮುಗಿಸಿದ ವಿಷಾದ ಛಾಯೆ ಸೂಸುವ ಬೂದು ಬಣ್ಣದ ಆಕಾಶ... ಇವೆಲ್ಲವನ್ನು ಆ್ಯಕ್ರಿಲಿಕ್ ಮಾಧ್ಯಮದಲ್ಲಿ ಕಲಾವಿದ ಸುಶೀಲ್ ತರ್ಬಾರ್ ಬಿಡಿಸಿದ್ದಾರೆ.
ಕಾಶಿ ಸಾಂಸ್ಕೃತಿಕ ನಗರ. ಬನಾರಸ ವಿಶ್ವವಿದ್ಯಾಲಯದಷ್ಟೇ ಖ್ಯಾತಿ ಪಡೆದಿವೆ ಇಲ್ಲಿಯ ಗಂಗಾನದಿ ತಟದ ಘಾಟ್ಗಳು. ಗಂಗಾ ಸ್ನಾನ, ಗಂಗಾರತಿಯಷ್ಟೇ ಇಲ್ಲಿಯ ನದಿಪಾತ್ರವೂ ಖ್ಯಾತಿ ಪಡೆದಿದೆ. ಶಾಂತವಾಗಿ ಹರಿಯುವ ಗಂಗೆಯ ಹಿನ್ನೆಲೆಯಲ್ಲಿ ಕಾಶಿಯನ್ನು ತೋರಿಸುವ ಚಿತ್ರಗಳ ಪ್ರದರ್ಶನವನ್ನು ಈಚೆಗೆ ಸುಶೀಲ್ ನಗರದಲ್ಲಿ ಏರ್ಪಡಿಸಿದ್ದರು.
ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಸುಶೀಲ್ ಅದನ್ನೇ ವೃತ್ತಿಯಾಗಿಯೂ ಆಯ್ಕೆ ಮಾಡಿಕೊಂಡರು. ಆಸಕ್ತಿಯ ಇರುವಲ್ಲಿ ಯಶಸ್ಸು ಇದ್ದೇ ಇರುತ್ತದೆ. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಸುಶೀಲ್.
ವರ್ಣಚಿತ್ರಗಳಲ್ಲಿ ಅವರವರ ಭಾವಕ್ಕೆ ತಕ್ಕಂತಹ ಬಣ್ಣಗಳನ್ನು ಬಳಸಲಾಗಿದೆ. ಬದುಕಿನ ಸರ್ವ ರಸಗಳೂ ಈ ಗಾಢ ವರ್ಣ ಸಂಯೋಜನೆಯಲ್ಲಿ, ತೆಳು ಬಣ್ಣದ ಶೇಡ್ಗಳಲ್ಲಿ ಎದ್ದು ಕಾಣುತ್ತದೆ.
ಜುಲೈ 2ರಂದು ಕೊನೆಗೊಂಡ ಈ ಏಕವ್ಯಕ್ತಿ ಪ್ರದರ್ಶನ ಜನರ ಗಮನ ಸೆಳೆದದ್ದಂತೂ ನಿಜ.