ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಯುದ್ಧಕಾಂಡ...

Last Updated 25 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಸಾವು ಎದೆ ಮೇಲೇ ಬಿದ್ದಿದೆ
ಕಣ್ಣೀರು ದಡದುದ್ದಕ್ಕೂ
ಪ್ರವಾಹದ ಭೀತಿಯಿಂದ ಕೂತಿದೆ
ಮಧ್ಯೆ ಏನಿಲ್ಲ
ಹರಿಯುವ ನದಿಗೆ ಹಾಕ ಹೊರಟ
ಬೇಲಿ
ತೇಲುತ್ತಿದೆ!
ತೇಲುತ್ತಾ... ಇಗಾ
ಈಗ ಈ ಕಡೆ
ಮತ್ತೆ ಆ ಕಡೆ
ಪ್ರವಾಹ ಬಂದರೆ ಯಾವ ದಡಕ್ಕೂ
ಉಳಿಗಾಲವಿಲ್ಲ
ಈಗೇನೋ ದೂರವಿದ್ದೀವಿ
ನಮಗೆ ಸೂತಕವಿಲ್ಲ
ಅಷ್ಟಕ್ಕೇ ನಮ್ಮ ನಾಳೆಗಳೇನು ನಮ್ಮ ಸ್ವಂತದ್ದವಲ್ಲ!

ಮೋಡ ಅಳು ಕಟ್ಟಿ
ಆಚೀಚೆ ಅಲೆಯುತ್ತಿದೆ
ಗುಡುಗುತ್ತಾ ಸಿಡಿಲು
ಎದೆ ತಲೆಯ ಸೀಳಿಹೊಕ್ಕು; ಜೀವ
ಮಳೆಹನಿಗಿಂತ ಬಿರುಸಾಗಿ ಮಣ್ಣುಪಾಲು

ಕೊಲ್ಲುವ ಮನುಷ್ಯರ(?)
ಹಸಿವಿನ ಸೂತ್ರ ಯಾವುದೋ
ಸೂತಕದ ತಲೆಗಳ ಅನಂತ ಗಣಿತ
ಕಳೆದುಹಾಕುತ್ತಿರುವುದು ಎಲ್ಲವನ್ನು
ಸಂಪೂರ್ಣ ಎಲ್ಲವನ್ನೂ
ನಾವು ದೂರವಿದ್ದೇವೆ
ಈಗೇನೋ ವ್ಯತ್ಯಾಸವಾಗುವುದಿಲ್ಲ
ಅಷ್ಟಕ್ಕೇ ನಮ್ಮ ನೆತ್ತಿಯ ಆಕಾಶ ತಿಳಿಯಾಗೇನಿಲ್ಲ

**

ಅಯ್ಯೋ...
ಅಂತ
ಎಂಥವರೂ ಮರುಗುತ್ತಾರೆ
ಎದೆ ಕಿವುಚಿದರೆ ಎರಡು ಹನಿ ನೋವು
ಕರುಳು ಚೀರಿದರೆ ಎರಡು ನಿಮಿಷದ ಮೌನ
ಯಾವ ಪ್ರಾರ್ಥನೆಯೂ ಕಳೆಯುವುದಿಲ್ಲ
ಖಾಲೀ ಕಣ್ಣಿನ ಸಜೀವ ನೆನಪುಗಳ
ಕೆಂಪುಕೋಡಿಯ ಕಡುಗಪ್ಪು ಹೆಪ್ಪುಗಳ
ಉಜ್ಜಿ ಬಣ್ಣ ತೀಡಿ
ಕಣ್ಣ ಮಸೂರಗಳಿಗೆ
ಬೇಗನೆ
ಕನ್ನಡಿ, ಭೂತಗನ್ನಡಿಗಳ ತಯಾರಿಸಿ
ಸೂಕ್ಷ್ಮ ನೋಡುವುದು..
ಸೂಕ್ಷ್ಮ ನೋಡಿಕೊಳ್ಳುವುದೆರಡೇ ಆಯ್ಕೆ ಈಗ

ಬರುವ ದಿನಗಳ ಮುಲಾಮಿಗೆ
ಕೆರೆದು ಗಾಯ ಮಾಡಿಕೊಳ್ಳುವುದಲ್ಲ ಬದುಕು!
ಈಗೇನೋ ವ್ಯತ್ಯಾಸವಾಗುವುದಿಲ್ಲ
ಹಾಗಂತ.. ಈ ಮುಲಾಮೂ
ಮೀರಿದ ಗಾಯಗಳ ಮಾಯಿಸುವುದಿಲ್ಲ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT