ಕಂದಾಯ ಸಚಿವರಾಗಿದ್ದ ಏಕನಾಥ್ ಖಡ್ಸೆ ಅವರು ಶನಿವಾರ ರಾಜೀನಾಮೆ ಸಲ್ಲಿಸಿದ್ದರು. ಅಕ್ರಮ ಭೂ ವ್ಯವಹಾರ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಖಡ್ಸೆ ಅವರ ವಿರುದ್ಧ ಕೇಳಿ ಬಂದಿತ್ತು.
ಈ ಸಂಬಂಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮಹಾರಾಷ್ಟ್ರ ಬಿಜೆಪಿಯಿಂದ ವರದಿ ಕೇಳಿದ್ದರು. ದೇವೇಂದ್ರ ಫಡಣವೀಸ್ ಇತ್ತೀಚೆಗೆ ಹುಟ್ಟಿದ ನಾಯಕ. ಅವರಿಗೆ ರಾಜಕೀಯ ಜ್ಞಾನವಿಲ್ಲ ಎಂದು ಖಡ್ಸೆ ಭಾವಿಸಿದ್ದರು. ಆದರೆ, ಅವರೇ ಖಡ್ಸೆ ಅವರಿಗೆ ಮುಳುವಾಗಿದ್ದಾರೆ ಎಂದು ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಕಳೆದ ಆರು ತಿಂಗಳಿನಿಂದ ಎಸಿಬಿ ಖಡ್ಸೆ ಅವರ ಆಪ್ತ ಸಹಾಯಕ ಗಜಾನನ ಪಾಟೀಲ್ ಅವರ ಹಿಂದೆ ಬಿದ್ದಿತ್ತು. ಆದರೆ, ಖಡ್ಸೆ ಅವರಿಗೆ ಇದು ತಿಳಿದಿರಲಿಲ್ಲ ಎಂದು ಸಾಮ್ನಾ ಹೇಳಿದೆ.
ಖಡ್ಸೆ ವಿರುದ್ಧ ಆರೋಪ ಕೇಳಿ ಬಂದ ನಂತರ ಫಡಣವೀಸ್ ಒಮ್ಮೆಯೂ ಅವರ ರಕ್ಷಣೆಗೆ ನಿಲ್ಲಲಿಲ್ಲ. ಇದು ಫಡಣವೀಸ್ ಅವರ ರಹಸ್ಯ ಕಾರ್ಯಸೂಚಿಗೆ ಸಾಕ್ಷಿ ಎಂದು ಹೇಳಿದೆ.
ಖಡ್ಸೆ ವಿರುದ್ಧ ತನಿಖೆಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಫಡಣವೀಸ್ ಹೇಳಿದ್ದಾರೆ.