<p><strong>ವಿಶ್ವ ವಿಖ್ಯಾತ ದಸರಾ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ `ಯುವ ದಸರಾ~ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ತಂಡಗಳು ಪ್ರಸ್ತುತಪಡಿಸಿದ ಹಾಡು, ನೃತ್ಯ ಪ್ರದರ್ಶನಗಳು ಸಾಂಸ್ಕೃತಿಕ ನಗರಿಯನ್ನು ಸಂತಸದ ಅಲೆಯಲ್ಲಿ ನಲಿಯುವಂತೆ ಮಾಡಿದವು. <br /> <br /> </strong>ಅರಮನೆ ಊರಿನ ಮಹಾರಾಜ ಕಾಲೇಜು ಮೈದಾನದ `ಯುವ ದಸರಾ~ ವೇದಿಕೆಯಲ್ಲಿ ಇಳಿಸಂಜೆ ಹೊತ್ತಿನಲ್ಲಿ ಯುವ ಪಡೆಯ ಹಾಡು, ನೃತ್ಯ, ಸಂಗೀತ ಮನರಂಜನೆಯು ರಸದೌತಣ ಬಡಿಸಿತು. <br /> <br /> ಪಾರಂಪರಿಕ ನಗರಿ, ರಾಜ್ಯದ ಕಾಲೇಜು, ಜೊತೆಗೆ ಹರಿಯಾಣ, ಒಡಿಶಾ, ಪಂಜಾಬ್, ಅಸ್ಸಾಂ, ಮಿಜೋರಾಂ, ರುವಾಂಡ, ಶ್ರೀಲಂಕಾ, ಟಿಬೆಟ್, ನೇಪಾಳಿ ಹುಡುಗ-ಹುಡುಗಿಯರ ತಂಡಗಳ ಮೈನವಿರೇಳಿಸುವ ನೃತ್ಯಗಳು ಪ್ರೇಕ್ಷಕರನ್ನು ಆನಂದ ಸಾಗರದಲ್ಲಿ ಮಿಂದು ಏಳುವಂತೆ ಮಾಡಿದವು. <br /> <br /> ದಸರಾ ಸೊಬಗನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದವರಿಗೆ ಯುವ ಕಲಾವಿದರ ಸಾಂಸ್ಕೃತಿಕ ವೈಭೋಗದ ಸೊಬಗಿನ ಸಂಗೀತ, ಕುಣಿತ ನಾದಗಳು ಕಿಕ್ಕಿರಿದು ಸೇರಿದ್ದ ಕಲಾರಾಧಕರಲ್ಲಿ ಖುಷಿಯ ಕಿಚ್ಚು ಹಚ್ಚಿ ಹುಚ್ಚೆದ್ದು ಗ್ಯಾಲರಿಯಲ್ಲೇ ಸ್ಟೆಪ್ ಹಾಕುವಂತೆ ಮಾಡಿದವು. <br /> <br /> ಅದ್ದೂರಿ ವೇದಿಕೆ, ಅಬ್ಬರದ ಸಂಗೀತ, ವಸ್ತ್ರಾಡಂಬರ, ಜಗಮಗಿಸುವ ವಿದ್ಯುತ್ ದೀಪಗಳ ಹಿನ್ನೆಲೆ, ಪೌರಾಣಿಕ- ಸಾಂಪ್ರದಾಯಿಕ-ಪಾಶ್ಚಾತ್ಯ ಹಾಡುಗಳ ಮೋಡಿ, ಭರ್ಜರಿ ನೃತ್ಯ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದವು. <br /> <br /> ಮೈದಾನದ ತುಂಬೆಲ್ಲಾ ರೋಮಾಂಚನ, ಹರ್ಷೋದ್ಗಾರ ಹರಡಿತು. ನೃತ್ಯಕ್ಕೆ ತಕ್ಕ ವಸ್ತ್ರ, ಹಾಡಿಗೆ ತಕ್ಕ ಹೆಜ್ಜೆ-ಗೆಜ್ಜೆ ನಾದವು ಅಲ್ಲಿ ಹದವಾಗಿ ಮೇಳೈಸಿತ್ತು.<br /> <br /> ಚೆಲ್ಲಿದರೂ ಮಲ್ಲಿಗೆಯಾ ಬಾನಾ ಸೂರೇರಿ ಮ್ಯಾಗೆ... ಎಲ್ಲೋ ಜೋಗಪ್ಪ ನಿನ್ನ ಅರಮನೆ.. ವಂದೇ ಮಾತರಂ...ಇಂಪಾದ ಹಾಡುಗಳಿಗೆ ಯುವಕ - ಯುವತಿಯರು ಹೆಜ್ಜೆ ಹಾಕಿದರು. ಕುಣಿತದ ಜತೆ, ಹಾಡು, ಸಂಗೀತದ ಹಿನ್ನೆಲೆಯು ನೃತ್ಯ- ಸಂಗೀತ ಪ್ರಿಯರನ್ನು ಏಕಕಾಲಕ್ಕೆ ಸಂತಸದ ಅಮಲಿನಲ್ಲಿ ತೇಲಿಸಿತು. <br /> <br /> ನೃತ್ಯಗಳು ರಂಜನೆಯ ಜೊತೆ ಜೊತೆಗೆ ಸಂದೇಶ ಸಾರುತ್ತ ಸಾಂಸ್ಕೃತಿಕ ವೈಶಿಷ್ಟ್ಯತೆ ಬಿಂಬಿಸುತ್ತಿದ್ದವು. ವಿದೇಶಿ ತಂಡಗಳೂ ಆ ದೇಶಗಳ ನಾಟ್ಯ ಸೊಬಗನ್ನು ಅನಾವರಣಗೊಳಿಸಿದವು.<br /> <br /> ರಾಮ-ರಾವಣರ ಯುದ್ಧ, ಬಣ್ಣಗಳ ಚಿತ್ತಾರ, ಗ್ರಾಮೀಣ ಸೊಬಗು, ನವಿಲಿನ ನಾಟ್ಯ, ದಶಾವತರ ದರ್ಶನ, ಭ್ರಷ್ಟಾಚಾರ ವಿರುದ್ಧದ ಹೋರಾಟ ಇತ್ಯಾದಿ ಸಾರ ಒಳಗೊಂಡ ನೃತ್ಯಗಳು ನೆರೆದಿದ್ದವರ ಖುಷಿಗೆ ಕಿಚ್ಚು ಹಚ್ಚಿದ್ದವು. ಯುವ ಹೃದಯಗಳ ಹೆಜ್ಜೆ-ಗೆಜ್ಜೆ ಕುಣಿತದ ಸಪ್ಪಳದ ಗುಂಗಿಗೆ ಪ್ರೇಕ್ಷಕ ಸಾಗರದಲ್ಲಿ ಶಿಳ್ಳೆ, ಚಪ್ಪಾಳೆ, ಚೀರಾಟದ ಸದ್ದಿನದ್ದೇ ದರ್ಬಾರು.<br /> <br /> ಭರತನಾಟ್ಯ, ನೃತ್ಯರೂಪಕ, ಜಾಯ್ ಆಫ್ ಕಲರ್, ಫ್ಯೂಷನ್, ಧಮಾಲ್,ದಶಾವತಾರ, ಅರೆ ಶಾಸ್ತ್ರೀಯ ಕುಣಿತ, ತಾಲ್ ರಿದಂ ಆಫ್ ಲೈಫ್, ಋತುವೈಭವ, ಗೋಟಿಪುವಾ, ಬಾಂಗ್ಡಾ-ಚೀನಿ-ಬಂಬೂ- ಒಡಿಶಾ-ಬೀಹೂ-ರಾಜಸ್ತಾನಿ ನೃತ್ಯ, ರಾಮಾಯಣ ಡ್ಯಾನ್ಸ್ ಡ್ರಾಮಾ, ಕಂಟೆಪರರಿ, ಬ್ಯಾಲೆ, ಜಾನಪದ ನೃತ್ಯಗಳ ಅದ್ಭುತ ಪ್ರದರ್ಶನಗಳು ಸಾಂಸ್ಕೃತಿಕ ಸಗ್ಗದ ಸಿರಿಯನ್ನು ಅಲ್ಲಿ ಸೃಷ್ಟಿಸಿದವು.<br /> <br /> ಗಾಯಕರಾದ ಹರಿಹರನ್, ವಸುಂಧರಾ ದಾಸ್, ಕವಿತಾ ಕೃಷ್ಣಮೂರ್ತಿ, ವಿಶಾಲ್ ಶೇಖರ್, ಉದಿತ್ ನಾರಾಯಣ್, ನಂದಿತಾ-ಹೇಮಂತ್ ಇವರ ಸಂಗೀತ ಸುಧೆಗಳು ಆ ಮೈದಾನದಲ್ಲಿ ಪ್ರೇಕ್ಷಕ ದುಂಬಿಗಳ ಜೇನುಗೂಡನ್ನೇ ಕಟ್ಟಿಸಿದ್ದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವ ವಿಖ್ಯಾತ ದಸರಾ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ `ಯುವ ದಸರಾ~ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ತಂಡಗಳು ಪ್ರಸ್ತುತಪಡಿಸಿದ ಹಾಡು, ನೃತ್ಯ ಪ್ರದರ್ಶನಗಳು ಸಾಂಸ್ಕೃತಿಕ ನಗರಿಯನ್ನು ಸಂತಸದ ಅಲೆಯಲ್ಲಿ ನಲಿಯುವಂತೆ ಮಾಡಿದವು. <br /> <br /> </strong>ಅರಮನೆ ಊರಿನ ಮಹಾರಾಜ ಕಾಲೇಜು ಮೈದಾನದ `ಯುವ ದಸರಾ~ ವೇದಿಕೆಯಲ್ಲಿ ಇಳಿಸಂಜೆ ಹೊತ್ತಿನಲ್ಲಿ ಯುವ ಪಡೆಯ ಹಾಡು, ನೃತ್ಯ, ಸಂಗೀತ ಮನರಂಜನೆಯು ರಸದೌತಣ ಬಡಿಸಿತು. <br /> <br /> ಪಾರಂಪರಿಕ ನಗರಿ, ರಾಜ್ಯದ ಕಾಲೇಜು, ಜೊತೆಗೆ ಹರಿಯಾಣ, ಒಡಿಶಾ, ಪಂಜಾಬ್, ಅಸ್ಸಾಂ, ಮಿಜೋರಾಂ, ರುವಾಂಡ, ಶ್ರೀಲಂಕಾ, ಟಿಬೆಟ್, ನೇಪಾಳಿ ಹುಡುಗ-ಹುಡುಗಿಯರ ತಂಡಗಳ ಮೈನವಿರೇಳಿಸುವ ನೃತ್ಯಗಳು ಪ್ರೇಕ್ಷಕರನ್ನು ಆನಂದ ಸಾಗರದಲ್ಲಿ ಮಿಂದು ಏಳುವಂತೆ ಮಾಡಿದವು. <br /> <br /> ದಸರಾ ಸೊಬಗನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದವರಿಗೆ ಯುವ ಕಲಾವಿದರ ಸಾಂಸ್ಕೃತಿಕ ವೈಭೋಗದ ಸೊಬಗಿನ ಸಂಗೀತ, ಕುಣಿತ ನಾದಗಳು ಕಿಕ್ಕಿರಿದು ಸೇರಿದ್ದ ಕಲಾರಾಧಕರಲ್ಲಿ ಖುಷಿಯ ಕಿಚ್ಚು ಹಚ್ಚಿ ಹುಚ್ಚೆದ್ದು ಗ್ಯಾಲರಿಯಲ್ಲೇ ಸ್ಟೆಪ್ ಹಾಕುವಂತೆ ಮಾಡಿದವು. <br /> <br /> ಅದ್ದೂರಿ ವೇದಿಕೆ, ಅಬ್ಬರದ ಸಂಗೀತ, ವಸ್ತ್ರಾಡಂಬರ, ಜಗಮಗಿಸುವ ವಿದ್ಯುತ್ ದೀಪಗಳ ಹಿನ್ನೆಲೆ, ಪೌರಾಣಿಕ- ಸಾಂಪ್ರದಾಯಿಕ-ಪಾಶ್ಚಾತ್ಯ ಹಾಡುಗಳ ಮೋಡಿ, ಭರ್ಜರಿ ನೃತ್ಯ ನೆರೆದಿದ್ದವರನ್ನು ಮಂತ್ರಮುಗ್ಧರನ್ನಾಗಿಸಿದವು. <br /> <br /> ಮೈದಾನದ ತುಂಬೆಲ್ಲಾ ರೋಮಾಂಚನ, ಹರ್ಷೋದ್ಗಾರ ಹರಡಿತು. ನೃತ್ಯಕ್ಕೆ ತಕ್ಕ ವಸ್ತ್ರ, ಹಾಡಿಗೆ ತಕ್ಕ ಹೆಜ್ಜೆ-ಗೆಜ್ಜೆ ನಾದವು ಅಲ್ಲಿ ಹದವಾಗಿ ಮೇಳೈಸಿತ್ತು.<br /> <br /> ಚೆಲ್ಲಿದರೂ ಮಲ್ಲಿಗೆಯಾ ಬಾನಾ ಸೂರೇರಿ ಮ್ಯಾಗೆ... ಎಲ್ಲೋ ಜೋಗಪ್ಪ ನಿನ್ನ ಅರಮನೆ.. ವಂದೇ ಮಾತರಂ...ಇಂಪಾದ ಹಾಡುಗಳಿಗೆ ಯುವಕ - ಯುವತಿಯರು ಹೆಜ್ಜೆ ಹಾಕಿದರು. ಕುಣಿತದ ಜತೆ, ಹಾಡು, ಸಂಗೀತದ ಹಿನ್ನೆಲೆಯು ನೃತ್ಯ- ಸಂಗೀತ ಪ್ರಿಯರನ್ನು ಏಕಕಾಲಕ್ಕೆ ಸಂತಸದ ಅಮಲಿನಲ್ಲಿ ತೇಲಿಸಿತು. <br /> <br /> ನೃತ್ಯಗಳು ರಂಜನೆಯ ಜೊತೆ ಜೊತೆಗೆ ಸಂದೇಶ ಸಾರುತ್ತ ಸಾಂಸ್ಕೃತಿಕ ವೈಶಿಷ್ಟ್ಯತೆ ಬಿಂಬಿಸುತ್ತಿದ್ದವು. ವಿದೇಶಿ ತಂಡಗಳೂ ಆ ದೇಶಗಳ ನಾಟ್ಯ ಸೊಬಗನ್ನು ಅನಾವರಣಗೊಳಿಸಿದವು.<br /> <br /> ರಾಮ-ರಾವಣರ ಯುದ್ಧ, ಬಣ್ಣಗಳ ಚಿತ್ತಾರ, ಗ್ರಾಮೀಣ ಸೊಬಗು, ನವಿಲಿನ ನಾಟ್ಯ, ದಶಾವತರ ದರ್ಶನ, ಭ್ರಷ್ಟಾಚಾರ ವಿರುದ್ಧದ ಹೋರಾಟ ಇತ್ಯಾದಿ ಸಾರ ಒಳಗೊಂಡ ನೃತ್ಯಗಳು ನೆರೆದಿದ್ದವರ ಖುಷಿಗೆ ಕಿಚ್ಚು ಹಚ್ಚಿದ್ದವು. ಯುವ ಹೃದಯಗಳ ಹೆಜ್ಜೆ-ಗೆಜ್ಜೆ ಕುಣಿತದ ಸಪ್ಪಳದ ಗುಂಗಿಗೆ ಪ್ರೇಕ್ಷಕ ಸಾಗರದಲ್ಲಿ ಶಿಳ್ಳೆ, ಚಪ್ಪಾಳೆ, ಚೀರಾಟದ ಸದ್ದಿನದ್ದೇ ದರ್ಬಾರು.<br /> <br /> ಭರತನಾಟ್ಯ, ನೃತ್ಯರೂಪಕ, ಜಾಯ್ ಆಫ್ ಕಲರ್, ಫ್ಯೂಷನ್, ಧಮಾಲ್,ದಶಾವತಾರ, ಅರೆ ಶಾಸ್ತ್ರೀಯ ಕುಣಿತ, ತಾಲ್ ರಿದಂ ಆಫ್ ಲೈಫ್, ಋತುವೈಭವ, ಗೋಟಿಪುವಾ, ಬಾಂಗ್ಡಾ-ಚೀನಿ-ಬಂಬೂ- ಒಡಿಶಾ-ಬೀಹೂ-ರಾಜಸ್ತಾನಿ ನೃತ್ಯ, ರಾಮಾಯಣ ಡ್ಯಾನ್ಸ್ ಡ್ರಾಮಾ, ಕಂಟೆಪರರಿ, ಬ್ಯಾಲೆ, ಜಾನಪದ ನೃತ್ಯಗಳ ಅದ್ಭುತ ಪ್ರದರ್ಶನಗಳು ಸಾಂಸ್ಕೃತಿಕ ಸಗ್ಗದ ಸಿರಿಯನ್ನು ಅಲ್ಲಿ ಸೃಷ್ಟಿಸಿದವು.<br /> <br /> ಗಾಯಕರಾದ ಹರಿಹರನ್, ವಸುಂಧರಾ ದಾಸ್, ಕವಿತಾ ಕೃಷ್ಣಮೂರ್ತಿ, ವಿಶಾಲ್ ಶೇಖರ್, ಉದಿತ್ ನಾರಾಯಣ್, ನಂದಿತಾ-ಹೇಮಂತ್ ಇವರ ಸಂಗೀತ ಸುಧೆಗಳು ಆ ಮೈದಾನದಲ್ಲಿ ಪ್ರೇಕ್ಷಕ ದುಂಬಿಗಳ ಜೇನುಗೂಡನ್ನೇ ಕಟ್ಟಿಸಿದ್ದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>