ದಾವಣಗೆರೆ:ಯುವ ಕಥೆಗಾರ ಎಚ್.ಬಿ. ಇಂದ್ರಕುಮಾರ್ ಅವರ ಎರಡನೇ ಕಥಾ ಸಂಕಲನ `ನನ್ನ ನಿನ್ನ ನೆಂಟತನ~ ಮೇ 20ರಂದು ನಗರದ ರೋಟರಿ ಬಾಲಭವನದಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿದೆ.
ಕಥೆಗಾರ ವಸುಧೇಂದ್ರ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೋಕೇಶ ಅಗಸನಕಟ್ಟೆ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಬಿದಿರಹಳ್ಳಿ ನರಸಿಂಹಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಾಶಕ ಎ.ಎಚ್. ಪ್ರಸನ್ನಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಲೇಖಕ ಇಂದ್ರಕುಮಾರ್ ಅವರು ತಾಲ್ಲೂಕಿನ ಕುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದು, ಶಿಕ್ಷಣ, ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಸಾಕಷ್ಟು ದೈನಿಕ, ಸಾಪ್ತಾಹಿಕಗಳಲ್ಲಿ ಅವರ ಕಥೆ, ಲೇಖನಗಳು ಪ್ರಕಟವಾಗಿವೆ. ವಿವಿಧ ರಾಜ್ಯಮಟ್ಟದ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.
ಮೊದಲ ಕಥಾ ಸಂಕಲನ `ಆ ಮುಖ~ವನ್ನು 2011ರಲ್ಲಿ ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆ ಬಿಡುಗಡೆ ಮಾಡಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಅವರ ಎರಡನೇ ಕಥಾ ಸಂಕಲನವನ್ನು ತಮ್ಮ ಪ್ರಕಾಶನ ಸಂಸ್ಥೆ ವತಿಯಿಂದ ಬಿಡುಗಡೆ ಮಾಡುತ್ತಿರುವುದಾಗಿ ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಲೇಖಕ ಇಂದ್ರಕುಮಾರ್, ಚಂದ್ರಶೇಖರ ತೋರಣಘಟ್ಟ, ಶಿವಯೋಗಿ ಹಿರೇಮಠ, ಪ್ರಕಾಶ್ ಕೊಡಗನೂರು ಉಪಸ್ಥಿತರಿದ್ದರು.