ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ವರ್ಷದೊಳಗೆ 2.7 ಲಕ್ಷ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಸೌಲಭ್ಯವನ್ನು ಒದಗಿಸುವ ಗುರಿ ಇರಿಸಿಕೊಳ್ಳಲಾಗಿದೆ.
`ಆರಂಭಿಕ ಹಂತದಲ್ಲಿ ಬಿಪಿಎಲ್ ಕುಟುಂಬದವರು ಮಾತ್ರ ಯೋಜನೆಯ ಫಲಾನುಭವಿಗಳಾಗಿದ್ದರು. ಇದೀಗ ನಗರದ ಕೊಳಚೆ ಪ್ರದೇಶದ ನಿವಾಸಿಗಳು, ಆಟೋ ರಿಕ್ಷಾ ಚಾಲಕರು, ಸಫಾಯಿ ಕರ್ಮಚಾರಿಗಳು, ವಿಧವೆಯರು ಹಾಗೂ ಅಂಗವಿಕಲರು ಯೋಜನೆಯ ಲಾಭ ಪಡೆಯಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ನೆನಪಿನಲ್ಲಿ ಮಂಗಳವಾರದಿಂದ ಈ ಫಲಾನುಭವಿಗಳು ಆರೋಗ್ಯ ಸೇವಾ ಸೌಲಭ್ಯದ ಪ್ರಯೋಜನ ಪಡೆಯುವರು' ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಈವರೆಗೆ 20 ಸಾವಿರ ಬಿಪಿಎಲ್ ಕುಟುಂಬದವರು ಸೇರಿದಂತೆ 55 ಸಾವಿರ ಬಡ ಕುಟುಂಬಗಳಿಗೆ ಬಯೋಮೆಟ್ರಿಕ್ ಗುರುತಿನಚೀಟಿ ವಿತರಿಸಲಾಗಿದೆ. ಫಲಾನುಭವಿಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಒದಗಿಸಲು `ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್' ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಒಂದು ಕೋಟಿ ರೂಪಾಯಿಯನ್ನು ಪಾವತಿಸಲಾಗಿದೆ. `ಈಗಾಗಲೇ 269 ಬಿಪಿಎಲ್ ಕುಟುಂಬದವರು ಈ ಯೋಜನೆಯ ಸೌಲಭ್ಯ ಪಡೆದಿದ್ದು, ಈ ಸಂಬಂಧ 1.46 ಕೋಟಿ ಖರ್ಚು ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.
ಆಡಳಿತ ಪಕ್ಷದ ನಾಯಕ ನಾಗರಾಜ್, ಮಾಜಿ ಮೇಯರ್ ಎಸ್.ಕೆ.ನಟರಾಜ್, ಸದಸ್ಯ ಸತ್ಯನಾರಾಯಣ ಉಪಸ್ಥಿತರಿದ್ದರು.