ಸಾಗರ: ಮಾರಿಕಾಂಬಾ ಜಾತ್ರೆಯ ಅಂಗವಾಗಿ ಫೆ. 27ರಿಂದ ಮಾರ್ಚ್ 1ರವರೆಗೆ ನೆಹರು ಮೈದಾನದಲ್ಲಿ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಹಾಗೂ ಕುಸ್ತಿ ಸಮಿತಿ ಸಂಚಾಲಕ ಎಸ್.ವಿ. ಕೃಷ್ಣಮೂರ್ತಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಖ್ಯಾತ ಪೈಲ್ವಾನರಲ್ಲದೇ ಹೊರರಾಜ್ಯದ ಮಲ್ಲರೂ ಸೇರಿದಂತೆ 500ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ಸ್ಪರ್ಧಾಳುಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ‘ಮಾರಿಕಾಂಬಾ ಮಲ್ಲ’, ‘ಮಾರಿಕಾಂಬಾ ಕೇಸರಿ’, ‘ಮಾರಿಕಾಂಬಾ ಶ್ರೀ’ ಎಂಬ ಬಿರುದುಗಳನ್ನು ಪೈಲ್ವಾನರಿಗೆ ಪ್ರಧಾನ ಮಾಡಲಾಗುವುದು. ಒಟ್ಟು ್ಙ 3 ಲಕ್ಷ ನಗದು, ಬೆಳ್ಳಿ ಗದೆ ಹಾಗೂ ಬಂಗಾರದ ಬಳೆಗಳನ್ನು ಬಹುಮಾನದ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಪುರಸಭೆಯ ಮಾಜಿ ಅಧ್ಯಕ್ಷ ಎ. ಬೋಜಪ್ಪ ಅವರ ಹೆಸರಿನಲ್ಲಿ ವಿಶೇಷ ಕುಸ್ತಿ ಏರ್ಪಡಿಸಲಾಗಿದೆ. ಜಾನಪದ ಶೈಲಿಯಲ್ಲಿ ಅಖಾಡ ಹಾಗೂ ವೇದಿಕೆಯನ್ನು ನಿರ್ಮಿಸಲಾಗುವುದು. ಫೆ. 27ರಂದು ಮಧ್ಯಾಹ್ನ 2ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ.
ಜಿಲ್ಲಾಧಿಕಾರಿ ಪೊನ್ನುರಾಜ್ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಕುಸ್ತಿ ಸಮಿತಿ ಸದಸ್ಯರಾದ ದೇವೇಂದ್ರ, ಎಚ್.ಆರ್. ಶ್ರೀಧರ್, ಜೇಡಿಕುಣಿ ಮಂಜುನಾಥ್, ಎಸ್.ಎಸ್. ರಮೇಶ್, ಲೋಕೇಶ್, ಧರ್ಮಪ್ಪ, ಮೋಹನ್, ಶಿವಪ್ಪ, ಸುರೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.