ದೊಡ್ಡಬಳ್ಳಾಪುರ: `ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಇದೇ 29ರಂದು ಮೈಸೂರಿನಲ್ಲಿ ಸಂಘದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಮುಖರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು~ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಡಾ.ಎನ್.ವೆಂಕಟರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ರೈತ ಸಂಘದ ಉನ್ನತ ಸಮಿತಿ ಸಭೆಯಲ್ಲಿ ಸಂಘಟನೆ ಬಲಪಡಿಸಲು ಹೊಸಬರಿಗೆ ಆದ್ಯತೆ ನೀಡಬೇಕು~ ಎನ್ನುವ ಬಗ್ಗೆ ಚರ್ಚಿಸಲಾಯಿತೇ ಹೊರತು ಯಾವುದೇ ಉಚ್ಚಾಟನೆ ಕುರಿತು ಚರ್ಚೆ ನಡೆದಿಲ್ಲ ಎಂದು ಸ್ವಷ್ಟಪಡಿಸಿದರು.
ಕೆಲವು ಬಂಡವಾಳಶಾಹಿಗಳ ಕುತಂತ್ರಕ್ಕೆ ರೈತ ಸಂಘದ ನಾಯಕರು ಬಲಿಯಾಗಬಾರದು. ಮೈಸೂರಿನಲ್ಲಿ ಸಭೆ ನಡೆಯುವವರೆಗೂ ರೈತ ಸಂಘದ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನು ನಿಲ್ಲಸಬೇಕು. ಒಂದು ವೇಳೆ ಹೇಳಿಕೆ ನೀಡಿದರೆ, ರೈತ ಸಂಘ ಸಂವಿಧಾನಾತ್ಮಕ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.
`ಚಿತ್ರದುರ್ಗದಲ್ಲಿ ನಡೆದ ರೈತ ಮುಖಂಡರ ಸಭೆ ವಿಫಲವಾಗಿವೆ~ ಎಂದು ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿವೆ. ಅದು ಸತ್ಯಕ್ಕೆ ದೂರವಾದದು. ಈ ಸಭೆಯಲ್ಲಿ ರಾಜ್ಯ ಸಮಿತಿಯಲ್ಲಿನ ಆಡಳಿತಾತ್ಮಕ ಹೊಂದಾಣಿಕೆ, ಕೆಲವು ಕೊರತೆಗಳಿಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಆದರೆ ಕೆಲವರು ಇದನ್ನು ತಪ್ಪಾಗಿ ಅರ್ಥೈಸಿ, ಸಭೆ ವಿಫಲವಾಗಿದೆ ಎಂದು ಪ್ರಚಾರ ಮಾಡಿದ್ದಾರೆ ದೂರಿದರು.
ರೈತ ಸಂಘದ ತಾಲ್ಲೂಕು ಖಜಾಂಚಿ ಮುನಿರಾಜು, ಉಪಾಧ್ಯಕ್ಷ ಮುತ್ತೇಗೌಡ, ಮುಖಂಡರಾದ ಕೆ.ಪಿ.ಕುಮಾರ್, ರವಿ ಮತ್ತಿತರರು ಹಾಜರಿದ್ದರು.