ನವದೆಹಲಿ (ಪಿಟಿಐ): ಕಾರ್ಪೊರೇಟ್ ದಲ್ಲಾಳಿ ನೀರಾ ರಾಡಿಯಾ ಅವರು 2ಜಿ ತರಂಗಾಂತರ ಹಗರಣದಲ್ಲಿನ ಕಳಂಕಿತ ಡಿ.ಬಿ. ರಿಯಾಲಿಟಿ ಸಂಸ್ಥೆ ಜೊತೆಗೆ ಕೇಂದ್ರ ಸಚಿವ ಶರದ್ ಪವಾರ್ ಅವರಿಗೆ ಸಂಪರ್ಕ ಕಲ್ಪಿಸುವುದರೊಂದಿಗೆ 2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಆದರೆ ಕೇಂದ್ರ ಸಚಿವ ಪವಾರ್ ಅವರು ರಾಡಿಯಾ ಪ್ರತಿಪಾದನೆಯನ್ನು ತಳ್ಳಿ ಹಾಕಿದ್ದಾರೆ.
ಡಿಬಿ ರಿಯಾಲಿಟಿ ಕಂಪೆನಿಯನ್ನು ಶರದ್ ಪವಾರ್ ಅವರು ನಿಯಂತ್ರಿಸುತ್ತಿದ್ದಿರಬಹುದು ಮತ್ತು ಸ್ವಾನ್ ಟೆಲಿಕಾಂ ಸಂಸ್ಥೆಗೆ 2ಜಿ ತರಂಗಾಂತರ ಪರವಾನಗಿ ನೀಡುವಲ್ಲಿ ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರ ಜೊತೆಗೆ ನೆರವಾಗಿರಬಹುದು ಎಂಬುದಾಗಿ ರಾಡಿಯಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಂದಿರುವ ಮಾಧ್ಯಮ ವರದಿಗಳಿಗೆ ಪವಾರ್ ಗುರುವಾರ ಪ್ರತಿಕ್ರಿಯಿಸಿದರು.
ರಾಡಿಯಾ ಹೇಳಿಕೆ ಸಿಬಿಐ ದೋಷಾರೋಪ ಪಟ್ಟಿಯ ಒಂದು ಭಾಗ. ಆದರೆ ಸ್ವತಃ ಆಕೆಯೇ ಇದು ತನ್ನ ಗ್ರಹಿಕೆ. ಅದನ್ನು ಸಮರ್ಥಿಸಲು ಸಾಕ್ಷಾಧಾರ ಇಲ್ಲ ಎಂಬುದಾಗಿ ಹೇಳಿದ್ದರು.
~ಇದು ಶುದ್ಧ ಸುಳ್ಳು ಮತ್ತು ಮೂರ್ಖ ಹೇಳಿಕೆ. ಆಕೆಯ ಪ್ರತಿಪಾದನೆ ಬೇಜವಾಬ್ದಾರಿಯದು ಮತ್ತು ಅಪ್ಪಟ ಸುಳ್ಳು. ಯಾರೂ ಈ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ ಎಂದು ಪವಾರ್ ನುಡಿದರು.