ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ಹಾಗೂ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಜಂಟಿಯಾಗಿ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯನ್ನು ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಜೀವವೈವಿಧ್ಯ ಮೇಳದಲ್ಲಿ ಬುಧವಾರ ರಾತ್ರಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರು: ಒಡಿಶಾದ ಪಿರ್ ಜಹನಿಯಾ ಜಂಗಲ್ ಸುರಕ್ಷಾ ಸಮಿತಿ (ಸಮುದಾಯ ನಿರ್ವಹಣೆ ವಿಭಾಗ), ಮಹಾರಾಷ್ಟ್ರದ ಶಂಕರಪುರ ಗ್ರಾಮ ಪಂಚಾಯಿತಿ (ವಿಕೇಂದ್ರೀಕರಣ ನಿರ್ವಹಣೆ ವಿಭಾಗ), ರಾಜಸ್ತಾನದ ವನ ಉತ್ಥಾನ ಸಂಸ್ಥಾನ್ (ಸಹಕಾರ ತತ್ವದಡಿ ನಿರ್ವಹಣೆ ), ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಪೆರಿಯಾರ್ ಹುಲಿ ಅಭಯಾರಣ್ಯಕ್ಕೆ ಈ ಬಾರಿಯ ಪ್ರಶಸ್ತಿಗಳು ಲಭ್ಯವಾಗಿವೆ.
`ಜೀವವೈವಿಧ್ಯ ರಕ್ಷಣೆಯ ಜೊತೆಗೆ, ಸ್ಥಳೀಯರ ಬದುಕಿಗೂ ತೊಂದರೆಯಾಗದಂತೆ, ಸುಸ್ಥಿರ ಅಭಿವೃದ್ಧಿ ಕೈಗೊಳ್ಳುವ ಸಂಘ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಯುಎನ್ಡಿಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಸ್ತಿ ನೀಡಲು ಪಾಲುದಾರರಾದ ಯುಎನ್ಡಿಪಿ ಕ್ರಮವನ್ನು ಸ್ವಾಗತಿಸಿರುವ ಪರಿಸರ ಖಾತೆ ಸಚಿವೆ ಜಯಂತಿ ನಟರಾಜನ್, `ಮುಂದಿನ ವರ್ಷದಿಂದ ಈ ಪ್ರಶಸ್ತಿಯನ್ನು ಮಾರ್ಚ್ 22, ಅಂತರರಾಷ್ಟ್ರೀಯ ಜೀವವೈವಿಧ್ಯದ ದಿನ ಪ್ರದಾನ ಮಾಡಲಾಗುತ್ತದೆ~ ಎಂದರು.
ಭಾರತೀಯ ಜೀವವೈವಿಧ್ಯ ಪ್ರಶಸ್ತಿಗಾಗಿ ದೇಶದಾದ್ಯಂತ 150 ಅರ್ಜಿಗಳು ಬಂದಿದ್ದವು. ಖ್ಯಾತ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಅವರ ನೇತೃತ್ವದಲ್ಲಿ ರಚಿಸಿದ್ದ ಆರು ಸದಸ್ಯರ ತೀರ್ಪುಗಾರರ ತಂಡ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.