ಕೆ.ಆರ್.ನಗರ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜಯ ಕರ್ನಾಟಕ ಮತ್ತು ಕಾರು ಚಾಲಕರ ಸಂಘದ ಸದಸ್ಯರು ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘದ ಅಧ್ಯಕ್ಷ ಅನಿಲ್ಗೌಡ ಮಾತನಾಡಿ, ಕೇಂದ್ರ ಸರ್ಕಾರ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರಿಸಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ.
ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಕೂಡಲೇ ಇಂಧನ ಬೆಲೆ ಇಳಿಸಬೇಕು ಎಂದು ಅವರು ಆಗ್ರಹಿಸಿದರು.
ಕಾರು ಚಾಲಕರ ಸಂಘದ ಸದಸ್ಯ ಹರೀಶ್ ಮಾತನಾಡಿ, ಪಟ್ಟಣದ ಶ್ರೀಕಾಂತ್ ಗ್ಯಾಸ್ ಏಜೆನ್ಸಿಯವರು ಕೂಡ ಜನತೆಗೆ ಸರಿಯಾಗಿ ಗ್ಯಾಸ್ ವಿತರಣೆ ಮಾಡುತ್ತಿಲ್ಲ. ಗ್ರಾಹಕರೊಂದಿಗಿನ ಅವರ ವರ್ತನೆ ಸರಿಯಾಗಿಲ್ಲ. ಗ್ಯಾಸ್ ಅಂಗಡಿಯಲ್ಲಿ ದೂರವಾಣಿ ಇದ್ದರೂ ಸಹ ಗ್ರಾಹಕರ ಕರೆಯನ್ನು ಸ್ವೀಕರಿಸುವುದಿಲ್ಲ.
ಇದರಿಂದ ಗ್ಯಾಸ್ ಬುಕ್ ಮಾಡಲು ಗ್ಯಾಸ್ ಅಂಗಡಿಗೇ ಬರಬೇಕಾಗುತ್ತದೆ. ಗ್ಯಾಸ್ ಬುಕ್ ಮಾಡಿದ ಒಂದು ವಾರಕ್ಕೆ ಗ್ಯಾಸ್ ವಿತರಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದರು.
ಅವರ ವರ್ತನೆ ಇದೇ ರೀತಿ ಮುಂದುವರೆದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಎತ್ತಿನ ಬಂಡಿ, ಆಟೋ ಮತ್ತು ದ್ವಿಚಕ್ರವಾಹನದ ಮೂಲಕ ಗರುಡಗಂಬ ವೃತ್ತದ ಬಳಿಯಿಂದ ವಿವಿ ರಸ್ತೆ ಮೂಲಕ ಹೊರಟ ಪ್ರತಿಭಟನಾಕಾರರು ಮಾರ್ಗದ ಉದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು.
ಪ್ರಸನ್ನ, ಭೈರವ, ಕೊಪ್ಪಲು ಶಿವಣ್ಣ, ಯೊಗೀಶ್, ರವಿ, ಕಂಠಿ, ಶಿವಕುಮಾರ್, ಉಮೇಶ್, ಮನಿಷ್, ಕುಮಾರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.