ಇಸ್ಲಾಮಾಬಾದ್(ಪಿಟಿಐ): ‘ನಮ್ಮ ಪರಮಾಣು ಸ್ಥಾವರಗಳು, ಅಣ್ವಸ್ತ್ರಗಳು ಭಯೋತ್ಪಾದಕರ ಕೈ ಸೇರದಂತೆ ನಿಯಂತ್ರಿಸುವ, ಸಂರಕ್ಷಿಸುವ ಸಾಮರ್ಥ್ಯ ನಮಗಿದೆ’ ಎಂದು ಪಾಕಿಸ್ತಾನ ಭಾನುವಾರ ಖಚಿತವಾಗಿ ಹೇಳಿಕೊಂಡಿದೆ.
‘ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರಗಳ ಸಂರಕ್ಷಣೆ, ಸುರಕ್ಷತೆ ಆತಂಕದಲ್ಲಿದೆ’ ಎಂಬರ್ಥದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಹೇಳಿಕೆಗೆ ಪ್ರತಿಕ್ರಿಯೆ ರೂಪದಲ್ಲಿ ಈ ವಿವರಣೆ ನೀಡಲಾಗಿದೆ.
ಪಾಕ್ ವಿದೇಶಾಂಗ ಕಾರ್ಯಾಲಯದ ವಕ್ತಾರರಾದ ತೆಹಮಿನಾ ಜಂಜುವಾ ಈ ಉತ್ತರ ನೀಡಿದ್ದಾರೆ. ಪಾಕಿಸ್ತಾನ ಪರಮಾಣು ಅಸ್ತ್ರ ಹೊಂದಿದ ಜವಾಬ್ದಾರಿಯುತ ದೇಶ. ಇವುಗಳನ್ನು ಸಂರಕ್ಷಿಸುವ ಖಾತ್ರಿಯೂ ಅದಕ್ಕಿದೆ ಎಂದು ಅವರು ಹೇಳಿದ್ದಾರೆ.
‘ದಕ್ಷಿಣ ಏಷ್ಯಾದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಪಾಲನೆಗೆ ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಭಾರತ-ಪಾಕ್ ಸಂಬಂಧ ವೃದ್ಧಿಗೆ ಭಾರತವು ಹೊಸ ಮನಃಸ್ಥಿತಿಯೊಂದಿಗೆ ಸಿದ್ಧವಾಗಬೇಕಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ನಡೆದ ಏಷ್ಯಾ ಭದ್ರತಾ ಸಂಕಿರಣದಲ್ಲಿ ಪಾಲ್ಗೊಂಡು ಶಿವಶಂಕರ ಮೆನನ್ ಉಗ್ರರ ಬೆದರಿಕೆ, ಅಣ್ವಸ್ತ್ರ ಅವರ ಕೈಸೇರುವ ಆತಂಕ, ಪಾಕ್-ಆಫ್ಘನ್ ಪ್ರದೇಶದಲ್ಲಿ ಭಯೋತ್ಪಾದನೆ ಪ್ರಸಾರ, ಆರ್ಥಿಕ ಪ್ರಗತಿಗೆ ಹಿನ್ನಡೆ’ ಇತ್ಯಾದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.