ಬರಪೀಡಿತ ಪ್ರದೇಶಗಳ ರೈತರ ಮಕ್ಕಳ ಶೈಕ್ಷಣಿಕ ಶುಲ್ಕವನ್ನು ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದು ಒಳ್ಳೆಯ ನಿರ್ಧಾರವೇನೊ ಹೌದು. ಇದರಂತೆ ಅತಿವೃಷ್ಟಿಯಿಂದ ಹಾನಿ ಅನುಭವಿಸಿರುವ ರೈತರ ಮಕ್ಕಳ ಶಿಕ್ಷಣದ ವೆಚ್ಚವನ್ನೂ ಸರ್ಕಾರ ಭರಿಸಲು ಕ್ರಮ ಕೈಗೊಳ್ಳಬೇಕಿದೆ.
ಬರಪ್ರದೇಶದ ರೈತರಿಗಿಂತ ಅತಿವೃಷ್ಟಿ ಪೀಡಿತ ಪ್ರದೇಶದ ರೈತರು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ಬೀಳದ ಕಾರಣ ಬರದ ನಾಡಿನ ರೈತರು ವ್ಯವಸಾಯಕ್ಕೆ ಹೆಚ್ಚಿನ ಹಣವನ್ನು ವ್ಯಯ ಮಾಡಿರುವುದಿಲ್ಲ. ಆದರೆ ಅತಿವೃಷ್ಟಿ ಪೀಡಿತ ಪ್ರದೇಶದ ರೈತರ ಸ್ಥಿತಿ ಹೀಗಲ್ಲ. ಮಳೆ ಬಿದ್ದೊಡನೆ ಸಾಲಮಾಡಿ ಇಲ್ಲವೇ ಮನೆಯಲ್ಲಿದ್ದ ಚೂರುಪಾರು ಚಿನ್ನವನ್ನು ಅಡವಿಟ್ಟಾದರೂ ಕೃಷಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುತ್ತಾರೆ. ಇನ್ನೇನು ಬೆಳೆ ಬಂತು ಎನ್ನುವ ನಿರೀಕ್ಷೆಯಲ್ಲಿರುವಾಗ ಅತಿವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಇದೆ.
ಪಟ್ಟ ಶ್ರಮ ವ್ಯರ್ಥ; ಬೆಳೆಯೂ ಇಲ್ಲ, ಇದರ ಮಧ್ಯೆ ತಲೆಯ ಮೇಲೆ ಸಾಲದ ಹೊರೆ ಬೇರೆ. ಹೀಗಾಗಿ ಈ ರೈತರಿಗೆ ಹೆಚ್ಚಿನ ನೆರವು ಅಗತ್ಯ. ಮುಖ್ಯಮಂತ್ರಿಯವರು ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ.