ಕಳೆದ ವಾರ ಪ್ರಧಾನಿ ಮನಮೋಹನ್ ಸಿಂಗ್ ರಾಜಧಾನಿ ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಹೆಚ್ಚಿನ ಅಚ್ಚರಿಯ ಅಂಶಗಳನ್ನೇನೂ ಹೊರಹೊಮ್ಮಿಸಲಿಲ್ಲ. ಲೋಕಸಭೆ ಚುನಾವಣೆ ಸನಿಹವಾಗುತ್ತಿರುವಂತೆಯೇ ಅಧಿಕಾರ ದಂಡವನ್ನು ಹಸ್ತಾಂತರಿಸುವ ವಿಷಯವನ್ನು ಈ ಗೋಷ್ಠಿಯಲ್ಲಿ ಪ್ರಧಾನಿ ಪ್ರಕಟಿಸಿದ್ದಾರೆ. ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಪೂರ್ಣ ಅರ್ಹತೆ ಉಳ್ಳವರು ಎಂಬಂತಹ ಮಾತುಗಳನ್ನೂ ಆಡಿದ್ದಾರೆ.
ರಾಷ್ಟ್ರದ ಸದ್ಯದ ರಾಜಕೀಯ ವಾತಾವರಣವನ್ನು ಮನಮೋಹನ್ ಸಿಂಗ್ ಸರಿಯಾಗಿಯೇ ಗ್ರಹಿಸಿದ್ದಾರೆ. ಇತ್ತೀಚಿನವರೆಗೂ ನಿವೃತ್ತಿ ವಿಚಾರ ಪ್ರಸ್ತಾಪವಾದಾಗಲೆಲ್ಲಾ ಪ್ರಧಾನಿಯಾಗಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ ಎಂಬಂತಹ ಮಾತುಗಳ ನ್ನಾಡುತ್ತಿದ್ದರು ಅವರು. ಇನ್ನು ಈ ನುಡಿಗಳಿಗೆ ಆಸ್ಪದವಿಲ್ಲದಂತಾಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯ ನಂತರ ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿನ ಕಾಂಗ್ರೆಸ್ ಸೋಲು ಮುಂಬರುವ ಚುನಾವಣೆಗಳಲ್ಲಿನ ಫಲಿತಾಂಶಗಳಿಗೆ ಮುನ್ಸೂಚನೆ ಎಂಬ ಮಾತು ದೊಡ್ಡದಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲೂ ಹೆಚ್ಚಿನ ಪಕ್ಷಗಳು ಈಗ ಕಾಂಗ್ರೆಸ್ ಜೊತೆ ಉಳಿದುಕೊಂಡಿಲ್ಲ. ಭ್ರಷ್ಟಾಚಾರ, ಹಣದುಬ್ಬರ ಹಾಗೂ ಆರ್ಥಿಕ ಹಿಂಜರಿತಗಳಿಗೆ ಮನಮೋಹನ್ ನೇತೃತ್ವದ ಸರ್ಕಾರದ ನಿಷ್ಕ್ರಿಯತೆಯತ್ತಲೇ ಬೆರಳು ಮಾಡಲಾಗುತ್ತದೆ. ಚುನಾವಣೆ ಮುಂಚೆಗೇ ಮನಮೋಹನ್ ಅವರನ್ನು ಬದಲಾಯಿಸಬೇಕೆಂಬ ಒತ್ತಡವೂ ಕೆಲವು ವಲಯಗಳಲ್ಲಿ ಇತ್ತು. ಇಂತಹ ಸನ್ನಿವೇಶದಲ್ಲಿ, ಚುನಾವಣೆ ನಂತರ ಉನ್ನತ ಹುದ್ದೆ ನಿಭಾಯಿಸಲು ತಾವಿರುವುದಿಲ್ಲ ಎಂಬಂತಹ ಪ್ರಧಾನಿಯ ಮಾತುಗಳಲ್ಲಿ ಅಚ್ಚರಿ ಏನೂ ಇಲ್ಲ.
ಕಾಂಗ್ರೆಸ್ ಅಧ್ಯಕ್ಷರ ಅನುಕೂಲಕ್ಕಾಗಿ ಏರ್ಪಟ್ಟಿರುವ ಎರಡು ಅಧಿಕಾರ ಕೇಂದ್ರಗಳ ವ್ಯವಸ್ಥೆ ಪ್ರಧಾನಿ ಹುದ್ದೆಯನ್ನು ದುರ್ಬಲಗೊಳಿಸಿ ರುವುದು ಸರ್ವವಿದಿತ. ಆದರೆ ತಾವು ದುರ್ಬಲ ಪ್ರಧಾನಿ ಎಂಬಂತಹ ಮಾತನ್ನು ಪ್ರಧಾನಿ ಅಲ್ಲಗಳೆದಿದ್ದಾರೆ. ಇತಿಹಾಸ ಮುಂದೆ ತಮ್ಮನ್ನು ಸರಿಯಾದ ರೀತಿ ಅಳೆಯಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
‘ಹಣದುಬ್ಬರ ಇತ್ತೀಚಿನ ಚುನಾವಣಾ ಸೋಲುಗಳಿಗೆ ಕಾರಣವಾಗಿರಬಹುದಾದರೂ ಅದಕ್ಕೆ ಕಾರಣವಾದದ್ದು ಜಾಗತಿಕ ಆರ್ಥಿಕ ಸ್ಥಿತಿಗತಿಗಳು. ಯಾವುದೇ ಸರ್ಕಾರಕ್ಕೂ ಇದು ದೊಡ್ಡ ಸವಾಲೇ ಆಗಿರುತ್ತಿತ್ತು’ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ತರಂಗಾಂತರ ಹಾಗೂ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಗಳ ನೈತಿಕ ಹೊಣೆ ಹೊತ್ತುಕೊಳ್ಳಲೂ ಪ್ರಧಾನಿ ತಿರಸ್ಕರಿಸಿರುವುದು ಎದ್ದು ಕಾಣಿಸುವಂತಹದ್ದು. ಇವು ನಡೆದದ್ದು ಯುಪಿಎ ಮೊದಲ ಅವಧಿಯಲ್ಲಿ. ಆದರೆ ಎರಡನೇ ಅವಧಿಗೂ ಸಿಕ್ಕ ಜನಾದೇಶ ಭ್ರಷ್ಟಾಚಾರ ಆರೋಪಗಳಿಂದ ಯುಪಿಎಯನ್ನು ಮುಕ್ತಗೊಳಿಸುತ್ತದೆ ಎಂಬಂಥ ಸಮರ್ಥನೀಯವಲ್ಲದ ವಾದವನ್ನು ಪ್ರಧಾನಿ ಮಂಡಿಸಿದ್ದಾರೆ. ಇದೇ ತರ್ಕ ಅನ್ವಯಿಸಿದಲ್ಲಿ, ಮೂರು ಬಾರಿ ಮುಖ್ಯಮಂತ್ರಿ ಗದ್ದುಗೆಗೇರಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕುರಿತಾಗಿ ಮೃದುಭಾಷಿ ಮನಮೋಹನ್ ಸಿಂಗ್ ಮಾಡಿದ ಟೀಕೆಗಳು ಅರ್ಥಹೀನವಾಗುತ್ತವೆ.
ಹಲವು ಹಗರಣಗಳನ್ನು ನಿರ್ವಹಿಸುವಲ್ಲಿ ಯುಪಿಎ ಎಡವಿದ್ದು ಸ್ಪಷ್ಟ. ಪ್ರಧಾನಿಗೆ ನಿಕಟವಾಗಿದ್ದ ಕಾನೂನು ಸಚಿವ ಅಶ್ವನಿ ಕುಮಾರ್ ಹಾಗೂ ರೈಲ್ವೆ ಸಚಿವ ಪಿ.ಕೆ. ಬನ್ಸಲ್ ರಾಜೀನಾಮೆಗಳು ಮನಮೋಹನ್ ಪ್ರತಿಷ್ಠೆಗೆ ಭಂಗ ತಂದವು. ಹಲವು ನಿರ್ಧಾರಗಳು, ಹಾಗೆಯೇ ನಿರ್ಧಾರಗಳನ್ನು ಕೈಗೊಳ್ಳದೆ ನಿಷ್ಕ್ರಿಯವಾಗಿ ಉಳಿದದ್ದೂ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ಕೊಡುಗೆ ಸಲ್ಲಿಸಿದವು ಎಂಬುದನ್ನು ಮರೆಯುವಂತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.