ಅಗರ್ತಲ (ಐಎಎನ್ಎಸ್): ಬಾಂಗ್ಲಾದಲ್ಲಿನ ಹಿಂದೂಗಳು, ಬುದ್ಧರು ಹಾಗೂ ಇತರ ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಮೇಲೆ ಮೂಲಭೂತವಾದಿ ಮುಸ್ಲಿಮರು ದಾಳಿ ನಡೆಸದಂತೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಇಲ್ಲಿನ ಬಲಪಂಥೀಯ ಸಂಘಟನೆಗಳು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರನ್ನು ಕೋರಿದ್ದಾರೆ.
ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯನ್ನು ತಕ್ಷಣ ಕೊನೆಗೊಳಿಸುವುದಲ್ಲದೆ, ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಸುಟ್ಟು ಹಾಕಿರುವ ಪ್ರಾರ್ಥನಾ ಮಂದಿರಗಳನ್ನು ಪುನರ್ನಿರ್ಮಿಸುವ ಕುರಿತಂತೆ ಕೂಡಲೇ ಮಾತುಕತೆ ನಡೆಸಬೇಕು ಎಂದು ದೆಹಲಿ ಮೂಲದ ಮಾನವ ಹಕ್ಕುಗಳ ಹೋರಾಟದ ಏಷ್ಯಾ ಕೇಂದ್ರ (ಎಸಿಎಚ್ಆರ್)ದ ನಿರ್ದೇಶಕ ಸುಹಾಸ್ ಅವರು ಪ್ರಧಾನಿ ಹಾಗೂ ಮೂನ್ ಅವರಿಗೆ ಬರೆದ ಪತ್ರಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.