ಯಲಹಂಕ: ಇಲ್ಲಿನ ಪರಿಸರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಸ್ಥಳೀಯ ನಾಗರಿಕರ ಸಹಯೋಗದೊಂದಿಗೆ ಅಲ್ಲಾಳಸಂದ್ರ ಕೆರೆಯ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು.
ಶಾಸಕ ಎಸ್.ಆರ್.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಲಯಕ್ಕೆ ಮಂಜೂರಾದ ಅನುದಾನದಲ್ಲಿ ₨ 25,000 ಮೊತ್ತವನ್ನು ಕೆರೆ ಸ್ವಚ್ಛಗೊಳಿಸುವ ಕಾರ್ಯಕ್ಕಾಗಿ ಉಪಯೋಗಿಸಲು ನಿರ್ಧರಿಸಲಾಗಿದೆ. ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಸಂಘ–ಸಂಸ್ಥೆಗಳು ಹಾಗೂ ನಾಗರಿಕರು ಕೈಜೋಡಿಸಬೇಕು ಎಂದು ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ವಿರೂಪಾಕ್ಷ ಮೈಸೂರು ಮನವಿ ಮಾಡಿದರು.
ಸಂಘಟನೆ ಅಧ್ಯಕ್ಷ ಡಾ.ಎಸ್.ಟಿ.ತಾಯಪ್ಪ ಮಾತನಾಡಿ , ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ಸ್ಥಳೀಯ ನಾಗರಿಕರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಎರಡನೇ ಶ್ರಮದಾನ ಕಾರ್ಯ ಇದಾಗಿದ್ದು, ಕೆರೆಯ ಪಾದಚಾರಿ ರಸ್ತೆಯನ್ನು ಸ್ವಚ್ಛಗೊಳಿಸುವ, ಕಳೆ ಕೀಳುವ ಹಾಗೂ ನೀರಿನಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಗಮ್ ಸೈಕಲ್ ಶಾಪ್ ವತಿಯಿಂದ ಕೆರೆಯ ರಕ್ಷಣೆಗಾಗಿ ನಿಯೋಜಿಸಿರುವ ಭದ್ರತಾ ಸಿಬ್ಬಂದಿಗೆ 3 ಬೈಸಿಕಲ್ಗಳನ್ನು ಉಚಿತವಾಗಿ ನೀಡಲಾಯಿತು.
ಬಿಬಿಎಂಪಿ ಯಲಹಂಕ ವಲಯದ ಉಪ ಆಯುಕ್ತೆ ಸರೋಜಾದೇವಿ, ಬಿಬಿಎಂಪಿ ತೋಟಗಾರಿಕೆ ಸ್ಥಾಯಿ
ಸಮಿತಿ ಅಧ್ಯಕ್ಷ ಮುನಿರಾಜು, ಯಲಹಂಕ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅ.ಬ.ಶಿವ
ಕುಮಾರ್, ಪ್ರಾಂಶುಪಾಲ ನಾಗರಾಜ್ ಮೊದಲಾದವರು ಹಾಜರಿದ್ದರು.