ಬೆಂಗಳೂರು: ವಿಧಾನಸಭೆಯಲ್ಲಿ ಮೂವರು ಸಚಿವರು ಅಶ್ಲೀಲ ದೃಶ್ಯ ವೀಕ್ಷಣೆ ಮಾಡಿದ್ದ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ನಗರದ ಆನಂದ್ರಾವ್ ವೃತ್ತ ಸಮೀಪದ ಗಾಂಧಿ ಪ್ರತಿಮೆ ಬಳಿ ಗುರುವಾರ ಧರಣಿ ನಡೆಸಿದರು.
ಸಚಿವರು ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ದೃಶ್ಯಗಳು ಮಾಧ್ಯಮಗಳಿಂದ ಬಹಿರಂಗಗೊಂಡಿದ್ದು, ದೇಶದ ಜನತೆಗೆ ಸತ್ಯ ಗೊತ್ತಾಗಿದೆ. ಆದರೆ ಸದನ ಸಮಿತಿ ರಚಿಸಿ, ಪ್ರಕರಣ ಮುಚ್ಚಲು ಸರ್ಕಾರ ಮುಂದಾಗಿದೆ. ಈ ಘಟನೆಗಳು ವಾಸ್ತವವೆಂದು ತಿಳಿದಿದ್ದರೂ, ಸಭಾಧ್ಯಕ್ಷರು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮೂವರು ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಪಕ್ಷದ ನಾಯಕರು ಹೇಳಿಕೆ ನೀಡಿದ್ದಾರೆ. ಆದರೆ ಬಿಜೆಪಿಯಲ್ಲಿ ಇಂತಹ ಹಲವು ಕಳಂಕಿತ ಸಚಿವರು, ಶಾಸಕರು ಅಶ್ಲೀಲ ಸಂಸ್ಕೃತಿಯನ್ನು ಪ್ರದರ್ಶಿಸಿದ ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಕಾಮಣ್ಣರು ಎಂದು ಸಚಿವರು ಹಾಗೂ ಮಾಜಿಸಚಿವರ ಮುಖವಾಡ ಧರಿಸಿ ಅಣುಕು ಪ್ರದರ್ಶನ ಮಾಡಿದ ಪ್ರತಿಭಟನಾಕಾರರು, ಅವರ ಪ್ರತಿಕೃತಿಯನ್ನು ದಹನ ಮಾಡಿದರು. ಸಮಿತಿಯ ಸಧ್ಯಕ್ಷ ಟಿ.ಆರ್.ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಮನೋಹರ್, ಕಾರ್ಯದರ್ಶಿ ನಟರಾಜ್ ಗೌಡ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.