ಬೆಂಗಳೂರು: `ಪ್ರತಿ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳು ಸ್ನಾತಕೋತ್ತರ ಪದವಿ, ಡಿಪ್ಲೊಮಾ ನೀಡುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಾಗಿಯೂ ರೂಪುಗೊಳ್ಳಬೇಕು ಆಗ ಮಾತ್ರ ವೈದ್ಯರ ಕೊರತೆಯನ್ನು ನೀಗಿಸಲು ಸಾಧ್ಯವಿದೆ' ಎಂದು ನಾರಾಯಣ ಹೃದಯಾಲಯದ ಸಂಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ ಸಲಹೆ ನೀಡಿದರು.
ಅಸೋಸಿಯೇಷನ್ ಆಫ್ ಹೆಲ್ತ್ಕೇರ್ ಪ್ರೊವೈಡರ್ಸ್ (ಇಂಡಿಯಾ) ಸಂಸ್ಥೆಯು ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
`ದೇಶದಲ್ಲಿ ಆರೋಗ್ಯ ವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದೆ. ವರ್ಷವೊಂದಕ್ಕೆ ಆರೋಗ್ಯ ವಿ.ವಿಯಿಂದ ಹೊರಬರುತ್ತಿರುವ 45, 700 ಮಂದಿ ವೈದ್ಯರಲ್ಲಿ 14 ಸಾವಿರ ಮಂದಿ ಮಾತ್ರ ಸಾತ್ನಕೋತ್ತರ ಪದವಿ ಪಡೆದಿದ್ದಾರೆ. ಇನ್ನೂ 2 ಲಕ್ಷಕ್ಕೂ ಅಧಿಕ ಮಂದಿ ಸ್ನಾತಕೋತ್ತರ ಪದವಿ ಸೀಟಿಗಾಗಿ ಕಾಯುತ್ತಿದ್ದಾರೆ. ಒಂದೆಡೆ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳ ಸೀಟುಗಳ ಕೊರತೆ, ಇನ್ನೊಂದೆಡೆ ಪದವಿಯಲ್ಲಿ ಗುಣಮಟ್ಟ ಇಲ್ಲವಾಗಿದೆ' ಎಂದರು.