ಭಾಲ್ಕಿ: ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾಗಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಕೋನ ಮೇಳಕುಂದಾ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಸಾಯಂಕಾಲ ಸಂಭವಿಸಿದೆ. ಮೃತರನ್ನು ವೆಂಕಟ ಅವರ ಪುತ್ರ ಮಹೇಶ (11) ಅರ್ಜುನರ ಪುತ್ರ ಸಚಿನ್ (11) ವಿಠಲ ಅವರ ಮಗ ಪವನ (10) ಎಂದು ಗುರುತಿಸಲಾಗಿದೆ. ಇವರು 6ನೇ ತರಗತಿಯಲ್ಲಿ ಓದುತ್ತಿದ್ದರು.
ಗ್ರಾಮದ ಹೊರವಲಯದಲ್ಲಿನ ಕಲ್ಲಿನ ಕೋರೆಯ ಬಳಿ ನೀರು ಸಂಗ್ರಹವಾಗಿದ್ದ ಸ್ಥಳದಲ್ಲಿ ಇವರು ಈಜಲು ಹೋಗಿದ್ದರು. ಈಜು ಬಾರದೆ ಸೆಳೆತಕ್ಕೆ ಸಿಲುಕಿದ್ದು ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಧನ್ನೂರಾ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಯಾತನೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ.