ಹುಮನಾಬಾದ್: ಇಲ್ಲಿನ ಶಿವಪೂರ ಓಣಿಯ ಯುವಕ ರಾಘವೇಂದ್ರ ಶಿವಪ್ಪ ಮಡಿವಾಳನನ್ನು ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರು ವಿನಾಕಾರಣ ಹಲ್ಲೆ ಮಾಡಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ, ಪಟ್ಟಣದ ನೂರಾರು ಮಂದಿ ಸೋಮವಾರ ಸಂಜೆ ಶಾಸಕ ರಾಜಶೇಖರ ಪಾಟೀಲ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಘಟನೆ ವಿವರ: ಭಾನುವಾರ ರಾತ್ರಿ ಇಲ್ಲಿನ ಮುರಘಾಮಠ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ಬಂದೊಬಸ್ತ್ನಲ್ಲಿ ಇದ್ದ ಸಬ್ ಇನ್ಸ್ಪೆಕ್ಟರ್ ಮೆರವಣಿಗೆ ಶೀಘ್ರ ಮತ್ತು ಶಾಂತಿಯುತ ನಡೆಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಅದೇ ವೇಳೆ ಸದರಿ ಮಾರ್ಗದಿಂದ ಹೋಗುತ್ತಿದ್ದ ಮತ್ತೊಂದು ಗಣೇಶ ಮೆರವಣಿಗೆ ಮತ್ತು ಮುರಘಾಮಠ ಗಣೇಶ ಮೆರವಣಿಗೆ ಸದಸ್ಯರು ಪರಸ್ಪರ ನಾಮುಂದು, ತಾಮುಂದು ಎಂದು ಸ್ಪರ್ಧೆಗೆ ಮುಂದಾದರು ಎನ್ನಲಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಮಧ್ಯ ಪ್ರವೇಶಿಸಿದ ಸಬ್ ಇನ್ಸ್ಪಕ್ಟರ್ ಮತ್ತು ರಾಘವೇಂದ್ರ ಶಿವಪ್ಪ ಮಡಿವಾಳ(ದಾವೂದ್) ಇನ್ನೂ ಹಲವರ ಮಧ್ಯೆ ಬಿರುಸಿನ ಮಾತಿನ ಚಕಮಕಿ ನಡೆಯಿತು ಎಂದು ತಿಳಿದುಬಂದಿದೆ.
ಮೆರವಣಿಗೆ ಸಂದರ್ಭದಲ್ಲಿ ನೃತ್ಯದಲ್ಲಿ ನಿರತನಾಗಿದ್ದು, ನಿಜ ಆದರೇ ಯಾವುದೇ ರೀತಿ ಅಸಭ್ಯ ರೀತಿಯಲ್ಲಿ ವರ್ತಿಸದ ನನ್ನನ್ನು ಸಬ್ ಇನ್ಸ್ಪೆಕ್ಟರ ಅವರು ಕೇವಲವಾಗಿ ಮಾತನಾಡಿದ್ದು ಅಲ್ಲದೇ ನಾಳೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಇಂದು ಬೆಳಿಗ್ಗೆ ಮನೆಯಲ್ಲಿದ್ದ ನನ್ನನ್ನು ಕಳ್ಳತನ ಆರೋಪ ಮೇಲೆ ವಿಚಾರಣೆ ನಡೆಸಬೇಕಾಗಿದೆ ಎಂದು ಹೇಳಿ ಬೇಡಿಹಾಕಿ ಮುಖ್ಯರಸ್ತೆಯಿಂದ ದರದರ ಎಳೆದು ತಂದಿದ್ದಾರೆ. ಅಲ್ಲದೇ ತೀವ್ರ ಹಲ್ಲೆಗೈದಿದ್ದಾರೆ ಎಂದು ರಾಘವೇಂದ್ರ ಮಡಿವಾಳ ಸುದ್ದಿಗಾರರಿಗೆ ತಿಳಿಸಿದರು.
ಸಾರ್ವಜನಿಕರ ಎದುರು ಕೈಗೆ ಬೇಡಿಹಾಕಿ ಬೆತ್ತಲೆ ತಂದಿದ್ದಾರೆ. ಅಂಥ ಆರೋಪ ನಾನು ಮಾಡಿದ್ದಾದರೂ ಏನು ? ಇದರಿಂದ ನನಗೆ ಅಪಮಾನ ಆಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಸಂಬಂಧ ಬಾಟಲ್ ಒಡೆದು ಹೊಡೆದುಕೊಂಡಿದ್ದಾಗಿ ಮಡಿವಾಳ ಸುದ್ದಿಗಾರರಿಗೆ ವಿವರಿಸಿದರು.
ಡಿ.ವೈ.ಎಸ್ಪಿ ಸ್ಪಷ್ಟಿಕರಣ: ಮೆರವಣಿಗೆ ಸಂದರ್ಭದಲ್ಲಿ ಈ ವ್ಯಕ್ತಿ ಧಾಂದಲೆ ಮಾಡಿದ್ದ, ಮತ್ತು ಈತನ ಮೇಲೆ ಕಳ್ಳತನ ಆರೋಪ ಇತ್ತು. ವಿಚಾರಣೆ ಹಿನ್ನೆಲೆಯಲ್ಲಿ ಇಂದು ಮಲ್ಲಿಕಾರ್ಜುನ ಬಂಡೆ ಸದರಿ ಯುವಕನನ್ನು ವೈದ್ಯಕೀಯ ತಪಾಸಣೆ ಸಂಬಂಧ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವ್ಯಕ್ತಿಯ ಜೊತೆಗೆ ಇನ್ನಿಬ್ಬನ್ನು ವಿಚಾರಣೆಗೆ ಒಳಪಡಿಸುವ ವಿಚಾರ ತಿಳಿದು ಯುವಕರು ಈ ರೀತಿ ಧಾಂದಲೆ ನಡೆಸುತ್ತಿದ್ದಾರೆ ಎಂದು ಡಿ.ವೈ.ಎಸ್ಪಿ ಎ.ಎಸ್.ಚಿಪ್ಪಾರ ಸ್ಪಷ್ಟಿಕರಣ ನೀಡಿದರು.
ಸೂಕ್ತಕ್ರಮ: ತಪ್ಪು ಮಾಡಿದವರು ಸಾರ್ವಜನಿಕರೇ ಆಗಿರಲಿ, ಪೊಲೀಸ್ ಅಧಿಕಾರಿಗಳಾಗಲಿ ಯಾರಾದರೂ ಸರಿ ತಪ್ಪಿತಸ್ತರ ವಿರುದ್ದ್ಧ ಕ್ರಮ ಜರುಗಿಸಲಾಗುವುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸುವೆ. ಕ್ರಮ ಕೈಗೊಳ್ಳುವ ಸಂಬಂಧ ಅಗತ್ಯ ಬಿದ್ದರೆ ಗೃಹ ಸಚಿವ ಅಶೋಕ ಅವರನ್ನು ಸಂಪರ್ಕಿಸುವುದಾಗಿ ಶಾಸಕ ಪಾಟೀಲ ತಿಳಿಸಿದರು.
ಇದಕ್ಕೂ ಮುಂಚೆ ನೂರಾರು ವ್ಯಾಪಾರಸ್ಥರು, ಮುರಘಾಮಠ ಓಣಿಯ ಮಹಿಳೆಯರು ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಅವರ ವಿರುದ್ಧ ಘೋಷಣೆ ಕೂಗೂತ್ತ ಮುಖ್ಯಬೀದಿಯಿಂದ ಶಾಸಕ ರಾಜಶೇಖರ ಪಾಟೀಲ ಅವರ ನಿವಾಸಕ್ಕೆ ಆಗಮಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.