ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿದ ಅಡಿಕೆ ತೋಟ: ಪರಿಹಾರಕ್ಕೆ ಆಗ್ರಹ

Last Updated 23 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

ಚನ್ನಗಿರಿ:  ತಾಲ್ಲೂಕಿನಲ್ಲಿ ಮಳೆ ಇಲ್ಲದೇ ಪ್ರಕೃತಿ ವಿಕೋಪದಿಂದ ಸುಮಾರು 10 ಸಾವಿರಕ್ಕಿಂತ ಹೆಚ್ಚು ಅಡಿಕೆ ತೋಟಗಳು ಒಣಗಿ ಹೋಗಿದ್ದು, ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಬುಧವಾರ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

2003-04 ರಲ್ಲಿ ತಾಲ್ಲೂಕಿನಲ್ಲಿ ಸುಮಾರು 10 ಸಾವಿರ ಎಕರೆಗಿಂತ ಹೆಚ್ಚು ಪ್ರದೇಶದಲ್ಲಿದ್ದ ಫಸಲು ಬಿಡುವ ಅಡಿಕೆ ತೋಟಗಳು ನೀರಿಲ್ಲದೇ ಸಂಪೂರ್ಣವಾಗಿ ಒಣಗಿ ಹೋಗಿದ್ದವು. ಅಡಿಕೆ ಮರಗಳನ್ನು ರೈತರು ಕಡಿದು ಹಾಕಿದ್ದರು. ಅಂದಿನಿಂದ ಪರಿಹಾರಕ್ಕಾಗಿ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 

ಮಾರ್ಚ್ 1ರಂದು ಅಡಿಕೆ ತೋಟ ಕಳೆದುಕೊಂಡ ಬೆಳೆಗಾರರ ನಿಯೋಗವನ್ನು ತೆಗೆದುಕೊಂಡು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ಒಂದು ಎಕರೆ  ಅಡಿಕೆ ತೋಟ ಕಳೆದುಕೊಂಡವರಿಗೆ ರೂ.5 ಲಕ್ಷ ಪರಿಹಾರ ಧನ ನೀಡಲು ಒತ್ತಾಯಿಸಲಾಗುವುದು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿ.ಆರ್. ತಿಪ್ಪೇಶಪ್ಪ ತಿಳಿಸಿದರು.

ಪಟ್ಟಣದ ಕೃಷಿಕ ಸಮಾಜದ ಕಾರ್ಯಾಲಯದಲ್ಲಿ ಮೊದಲು ಸಭೆ ನಡೆಸಿ ನಂತರ ಅಲ್ಲಿಂದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು. ನಂತರ ತಹಶೀಲ್ದಾರ್ ಕಚೇರಿಗೆ ಬಂದು ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಕಾರ್ಯದರ್ಶಿ ಜಿ.ಎಂ. ಕುಮಾರಸ್ವಾಮಿ, ಮುಖಂಡರಾದ ಜೆ.ಟಿ. ಶಶಿಧರ್ ಮಲಹಾಳ್, ಶಿವಮೂರ್ತಿ, ಬಿ.ಆರ್. ಬಸವಲಿಂಗಪ್ಪ, ಎಸ್.ಸಿ. ನಾಗರಾಜಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶರಣರದು ಶ್ರೀಮಂತ ಸಾಹಿತ್ಯ
ಕನ್ನಡ ನಾಡಿಗೆ 12ನೇ ಶತಮಾನದ ಶರಣರು ವಚನಗಳ ಮೂಲಕ ಅಪರೂಪದ ಕೊಡುಗೆ ನೀಡಿದ್ದಾರೆ. ನಮ್ಮಲ್ಲಿ ಶರಣರ ಸಂಸ್ಕೃತಿ, ಸಂಸ್ಕಾರವನ್ನು ಅಳವಡಿಸಿಕೊಳ್ಳುವುದು ಆವಶ್ಯಕವಾಗಿದೆ. ಶರಣ ಸಾಹಿತ್ಯ ಅತ್ಯಂತ ಶ್ರೀಮಂತವಾದ ಸಾಹಿತ್ಯವಾಗಿದೆ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ ಹೇಳಿದರು.

ಪಟ್ಟಣದ ಮಹಾರುದ್ರಸ್ವಾಮಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಲಕ್ಕೋಳ್ ಬಸಪ್ಪ, ಗಂಗಮ್ಮ ಹಾಗೂ  ಹಂಚಿನಮನೆ ಬಸಪ್ಪ, ಸುಶೀಲಮ್ಮ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಷತ್ ಜಿಲ್ಲಾ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಕೆ.ಬಿ. ಕುಮಾರ್, ಕೆ. ಚಂದ್ರಪ್ಪ, ಶಂಕ್ರಯ್ಯ ಮತ್ತಿತರರು ಉಪಸ್ಥಿತರಿದ್ದರು. ಆರ್.ಎಸ್. ಮಲ್ಲಿಕಾರ್ಜುನ್ ಹಾಗೂ ಸುನಿತಾ ರಾಜು ಉಪನ್ಯಾಸ ನೀಡಿದರು.
ತರಬೇತಿ ಕೇಂದ್ರದ ಪ್ರಾಂಶುಪಾಲ ಜಯದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ್ ಪ್ರಾರ್ಥಿಸಿದರು. ಎಂ.ವಿ. ಕುಮಾರ್ ಸ್ವಾಗತಿಸಿದರು. ಎಂ.ಬಿ. ನಾಗರಾಜ್ ನಿರೂಪಿಸಿ ಅಜ್ಜಪ್ಪಚಾರಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT