ಕೊಡಗಿನ ಗೌರಮ್ಮ ವೇದಿಕೆ (ಮಡಿಕೇರಿ): ಹಿಡಿದಿಡದ ಕವಿತೆಗಳು, ಹಿಡಿತ ಬಿಟ್ಟ ಕವಿತೆಗಳು. ಕವಿಗಳಿಗೆ ಕಿವಿಯಾಗದೆ ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುತ್ತ ಕುಳಿತ ಸಹೃದಯರು. ತಮ್ಮ ಗೆಳೆಯರ, ಸಂಬಂಧಿಕರ ಕವಿತೆ ವಾಚನ ಮುಗಿದಾಕ್ಷಣ ಎದ್ದು ಹೋದವರು, ಮೊಬೈಲ್ನಲ್ಲಿ ಮಾತನಾಡುತ್ತ ಹೊತ್ತು ಕಳೆದವರು, ಎಸ್ಎಂಎಸ್ ಕಳಿಸುತ್ತ ಆಚೆ ಹೋಗಿ ಮತ್ತೆ ಬಂದವರು... ಹೀಗೆ ಮನಕ್ಕೆ ಮುಟ್ಟದ ಕವಿತೆಗಳಿಗೆ ಚಪ್ಪಾಳೆ ತಟ್ಟದೆ ತಟಸ್ಥರಾದವರ ನಡುವೆ 33 ಕವಿಗಳ ಕವಿತೆಗಳು ಕಳೆದು ಹೋದವು.
ಇದು ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮಾನಾಂತರ ವೇದಿಕೆಯಲ್ಲಿ ಗುರುವಾರ ಕಂಡ ದೃಶ್ಯ. ಕಣಜನಹಳ್ಳಿ ನಾಗರಾಜು ಅವರು ವಾಚಿಸಿದ, ‘ಸದ್ದುಗಳ ಸಂತೆಯಲ್ಲಿ ಹಾಡು ಮಾರಲು ಹೋದ ಕಾಡುಕೋಗಿಲೆಯ ಕಥೆ ಏನಾಯಿತು?’ ಎಂದು ಕೇಳಿದ ಹಾಗೆ, ಬರೀ ಸದ್ದು ಮಾಡಿದ ಕವಿಗೋಷ್ಠಿ ಸಂತೆಯಲ್ಲಿ ಮನಕ್ಕೆ ಮನೋಹರವಾದ ಕವಿತೆಗಳು ಸಿಕ್ಕಿದ್ದು ಬೆರಳೆಣಿಕೆಯಷ್ಟು.
ಇದನ್ನು ವಿಸ್ತರಿಸಿ ಹೇಳಿದವರು ಅಧ್ಯಕ್ಷತೆ ವಹಿಸಿದ್ದ ಕವಿ ಅಬ್ದುಲ್ ರಶೀದ್. ‘ನಮ್ಮನ್ನು ದೇವರೇ ಕಾಪಾಡಬೇಕು, ಕವಿತೆಗೆ ಈ ಗತಿ ಬಂತೇ? ಎಂಬ ಎಸ್ಎಂಎಸ್ಗಳು ಬಂದವು. ಇದರೊಂದಿಗೆ ಕವಿತೆ ವಾಚಿಸುವ ಮುನ್ನ ಪಕ್ಕದಲ್ಲಿ ಬಂದು ಕೂಡುತ್ತಿದ್ದ ಕವಿಗಳನ್ನು ಮಾತನಾಡಿದಾಗ ಕಸಾಪ ಪದಾಧಿಕಾರಿಗಳು ಇಲ್ಲವೆ ನಿಕಟಪೂರ್ವ ಪದಾಧಿಕಾರಿಗಳೇ ಹೆಚ್ಚು. ಕವಿಗೋಷ್ಠಿಯಲ್ಲಿ ಅವಕಾಶ ಕೊಡಿ ಎಂಬ ಶಿಫಾರಸ್ಸಿಗೆ ಬಗ್ಗುವುದು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಕಾವ್ಯ ಉದ್ಧಾರವಾಗುವುದಿಲ್ಲ’ ಎಂದು ಅವರು ಎಚ್ಚರಿಸಿದರು.
‘ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಹೆಚ್ಚು ಪುಸ್ತಕಗಳು ಮಾರಾಟವಾಗುತ್ತಿವೆ. ಎಲ್ಲ ಊರುಗಳಲ್ಲಿ ಈಗ ಕವನ ಸಂಕಲನಗಳು ಮುದ್ರಣವಾಗು-ತ್ತವೆ. ತಂತ್ರಜ್ಞಾನ ಅಬ್ಬರದಲ್ಲಿ, ಕವಿತೆಗಳನ್ನು ಮುದ್ರಿಸಿ, ಭರದಿಂದ ಮಾರಾಟ ಮಾಡಿ ಓದುಗರನ್ನು ಅಟ್ಟಾಡಿಸಿಕೊಂಡು ತಲುಪಿಸಲಾಗುತ್ತಿದೆ. ಇಂಥ ದಯನೀಯ ಸ್ಥಿತಿ ಓದುಗರಿಗೆ ಬೇಕೆ? ಶಾಪ ಹಾಕಿಕೊಂಡಾದರೂ ಕವಿತೆಗಳನ್ನು ಕೇಳಬೇಕಾದ ಸ್ಥಿತಿ ಇದೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಒಂದೇ ದಿನ, ಒಂದೇ ಸಮಯದಲ್ಲಿ ಎರಡು ಕವಿಗೋಷ್ಠಿಗಳನ್ನು ಏರ್ಪಡಿಸಿರುವ ಕುರಿತು ಸಂಘಟಕರನ್ನು ಕೇಳಿದೆ. ಎಲ್ಲ ಕವಿಗಳಿಗೆ ಅವಕಾಶ ಕೊಡಬೇಕು, ಜಿಲ್ಲಾವಾರು ಪ್ರಾತಿನಿಧ್ಯ ಕೊಡಬೇಕು ಎಂದರು. ಹಿಂದೆ ಬೇಂದ್ರೆ, ಕುವೆಂಪು ಮೊದಲಾದ ಕವಿಗಳು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಭಾಷಣ ಮಾಡಿದರೆ ಕನ್ನಡ ಸಾಹಿತ್ಯಕ್ಕೆ ದಿಕ್ಕು ತೋರಿಸುತ್ತಿತ್ತು. ಕಾವ್ಯಕ್ಕೆ ಹೊಸ ದಾರಿ ತೋರಿಸುತ್ತಿದ್ದರು. ಆದರೆ, ಈಗ ಕಾವ್ಯದ ಮಾನ ಕಾಪಾಡಬೇಕಿದೆ’ ಎಂದು ಕಾಳಜಿ ವ್ಯಕ್ತಪಡಿಸಿದರು.
ದಯನೀಯ ಸ್ಥಿತಿ: ‘ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜ ಅವರು ಅಧ್ಯಕ್ಷತೆಯ ಭಾಷಣ ಮಾಡುವಾಗ ಗಡಿಬಿಡಿಯಲ್ಲಿದ್ದರು. ಅನಿರೀಕ್ಷಿತವಾಗಿ ನಿಲ್ಲಿಸಿದರು. ಅವರನ್ನು ಕೇಳಿದಾಗ, ಭಾಷಣ ಆರಂಭಿಸುವ ಮುನ್ನವೇ ಬೇಗ ಮುಗಿಸಿಬಿಡಿ ಎಂಬ ಸೂಚನೆಯಿತ್ತು. ಗನ್ಮ್ಯಾನ್ಗಳ ರೀತಿ ನನ್ನ ಸುತ್ತ ಯಾರೋ ಸುಳಿದಾಡುತ್ತಿದ್ದರು. ಮೈಕ್ ಸರಿ ಮಾಡುವ ನೆಪದಲ್ಲಿ ಬೇಗ ಮುಗಿಸಿ ಎಂಬ ಒತ್ತಡ ಹೇರಿದ್ದರು ಎಂಬುದನ್ನು ಹೇಳಿದಾಗ ವೇದನೆಯಾಯಿತು. ಸಮ್ಮೇಳನದ ಅಧ್ಯಕ್ಷ ಎನ್ನುವುದು ನಾಡಿನ ಅತ್ಯುತ್ತಮ ಗೌರವ ಸಂಕೇತ. ಬೇಗ ಮಾತು ಮುಗಿಸಿ ಎಂಬ ಸೂಚನೆ ನೀಡಿ ಎಂದು ಗಾಬರಿಪಡಿಸುತ್ತೇವೆ. ಈ ದಯನೀಯ ಸ್ಥಿತಿ ಯಾಕೆ ಬಂತು?’ ಎಂದರು. ‘ಬಂಡಾಯದ ಮಾತು ಹೇಳುವವರು ವಿವಿಧ ಬಣ್ಣಗಳ ಬೆಳಕಲ್ಲಿ ಮಿಂಚುತ್ತಾರೆ. ರಾಜಕಾರಣಿಗಳ ಎದುರು ನಿಲ್ಲುತ್ತಾರೆ. ನಂತರ ಅಕಾಡೆಮಿ, ಪ್ರಾಧಿಕಾರದಂಥ ಆಯಕಟ್ಟಿನ ಜಾಗಗಳಲ್ಲಿ ಕುಳಿತುಕೊಳ್ಳುತ್ತಾರೆ. ಬಡವರ, ಶೋಷಿತರ, ದಯನೀಯರ ಬದುಕಿನ ಕುರಿತು ಮಾತನಾಡುವವರು ನಾ.ಡಿಸೋಜ ಅವರಿಗೆ ಭಾಷಣ ಬೇಗ ಮುಗಿಸಿ ಎಂದಾಗ ಯಾಕೆ ಪ್ರತಿಭಟಿಸಲಿಲ್ಲ?’ ಎಂದು ಪ್ರಶ್ನಿಸಿದರು.
ಅಸಂಗತರಾಗಬಾರದು: ‘ಸಾಹಿತ್ಯ ಸಮ್ಮೇಳನದಿಂದ ಕನ್ನಡದ ಕಹಳೆ ಮೊಳಗುತ್ತದೆ, ರೋಮಾಂಚನವಾಗುತ್ತದೆ ಎಂದು ಅನೇಕರು ಹೇಳಿದ್ದರು. ಆದರೆ, ಇಲ್ಲಿ ನಡೆದ ಗೋಷ್ಠಿಗಳ ಮಾತು ಕೇಳಿದಾಗ ರೋಮಾಂಚನ ಆಗಲಿಲ್ಲ. ಹಾಗೆಯೇ ಸಮ್ಮೇಳನಕ್ಕೆ ಜಾತ್ರೆಯ ಸ್ವರೂಪ ಕೊಡುವ ಅಗತ್ಯವಿಲ್ಲ. ತೂಕವಿಲ್ಲದ ಮಾತುಗಳಿಂದ, ಗೊಣಗುಟ್ಟುವಿಕೆಯ ಕವಿತೆಗಳಿಂದ ಸಾರ್ಥಕವಾಗುವುದಿಲ್ಲ. ಹೀಗೆ ಹೇಳುವ ಮೂಲಕ ವಿವಾದ ಮಾಡಬೇಕೆಂಬ ಉದ್ದೇಶವಿಲ್ಲ.
ಕವಿಗೋಷ್ಠಿಗಳು ಯಾಕೆ ಸೊರಗುತ್ತವೆ ಎಂಬುದನ್ನು ಗಮನಿಸಬೇಕು. ಜನಪ್ರಿಯತೆ, ಘೋಷಣೆ, ಇಸಂಗಳ ಹಿಂದೆ ಹೊರಡುವವರು ಅಸಂಗತರಾಗುತ್ತಾರೆ. ಕವಿಗಳು, ಸಾಹಿತಿಗಳು ಅಸಂಗತರಾಗದೆ ಸಮಾಜದಲ್ಲಿಯ ಬದಲಾವಣೆಗಳನ್ನು ಗಮನಿಸಬೇಕು. ಕವಿಗಳು, ಸಂಶೋಧಕರು ಎಲ್ಲೂ ಹೋಗದೆ ತಮ್ಮ ಮೂಗಿನ ನೇರಕ್ಕೆ ಕವಿತೆ ಬರೆಯುವುದು, ಸಂಶೋಧನ ಪ್ರಬಂಧ ರಚಿಸುವುದು ಸರಿಯಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.