ಚೆನ್ನೈ (ಪಿಟಿಐ): ಕೇಂದ್ರ ಯುಪಿಎ ಸರ್ಕಾರವೇ ಪಾರ್ಶ್ವವಾಯು ಪೀಡಿತವಾಗಿದೆ, ಅದು ತನ್ನ ಆಂತರಿಕ ಕಲಹಗಳಲ್ಲೆ ಮುಳುಗಿ ಹೋಗಿದ್ದು, ಜನಸಾಮಾನ್ಯರ ಜೀವನಾವಶ್ಯಕ ವಿಷಯಗಳತ್ತ ಲಕ್ಷ್ಯ ವಹಿಸಿಲ್ಲ ಎಂದು ಕಿಡಿಕಾರಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇದಕ್ಕೆ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಗೆಜೆಟ್ನಲ್ಲಿ ಪ್ರಕಟಿಸದೇ ಇರುವುದೆ ಸಾಕ್ಷಿ ಎಂದು ಮಂಗಳವಾರ ಹೇಳಿದ್ದಾರೆ.
ತಾವು ಮೇ 19 ರಂದೇ ಕಾವೇರಿ ಪ್ರಾಧಿಕಾರದ ಸಭೆ ಕರೆಯಬೇಕೆಂದು ಪ್ರಧಾನಿ ಅವರಿಗೆ ಪತ್ರ ಬರೆದಿದ್ದರೂ ಈವರೆಗೂ ಸಭೆ ಕರೆದಿಲ್ಲ. ತಕ್ಷಣ ಸಭೆ ಕರೆಯಬೇಕೆಂದು ಆಗ್ರಹಿಸಿದ್ದಾರೆ.
ಮೇ 14 ರಂದು ಜಯಲಲಿತಾ ಅವರು ಕರ್ನಾಟಕವು ಕಾವೇರಿ ನೀರನ್ನು ಅನ್ಯಾಯವಾಗಿ ಬೇಸಿಗೆ ನೀರಾವರಿಗೆ ಬಳಸುತ್ತಿದೆ ಎಂದು ಆರೋಪಿಸಿ ಇದಕ್ಕಾಗಿ ಕಾವೇರಿ ಪ್ರಾಧಿಕಾರದ ಸಭೆ ಕರೆಯುವಂತೆ ಆಗ್ರಹಿಸಿ ಪ್ರಧಾನಿ ಅವರಿಗೆ ಪತ್ರ ಬರೆದಿದ್ದರು.