ಶಿರಸಿ: ಇತ್ತೀಚಿನ ದಿನಗಳಲ್ಲಿ ವೈದ್ಯರಿಗೆ ವೃತ್ತಿಯಲ್ಲಿ ಮುನ್ನಡೆಯಲು ಅನಗತ್ಯ ಕಿರುಕುಳ ಉಂಟಾಗುತ್ತಿದ್ದು, ಭಯಮುಕ್ತ ವಾತಾವರಣದಲ್ಲಿ ರೋಗಿಗಳ ಚಿಕಿತ್ಸೆ ಮಾಡಲು ಸಹಕಾರ ನೀಡಬೇಕು ಎಂದು ವಿನಂತಿಸಿ ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಘಟಕವು ಸೋಮವಾರ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಐಎಂಎ ಸ್ಥಳೀಯ ಘಟಕದ ಅಧ್ಯಕ್ಷ ಡಾ.ಶಿವರಾಮ ಕೆ.ವಿ. ನೇತೃತ್ವದಲ್ಲಿ ಸಂಘಟನೆ ಸದಸ್ಯರು ಮನವಿ ಸಲ್ಲಿಸಿದರು. ತುರ್ತು ಸಂದರ್ಭದಲ್ಲಿ, ಗಂಭೀರ ಪರಿಸ್ಥಿತಿಯಲ್ಲಿ ಹೇಗೆ ಚಿಕಿತ್ಸೆ ಮಾಡಬೇಕು ಎಂಬುದರ ಕುರಿತು ನಿರ್ದೇಶನ ನೀಡಬೇಕು. ವಿವಿಧ ಸಂಘಟನೆಗಳು ಆಸ್ಪತ್ರೆಯನ್ನು ಗುರಿಯಾಗಿಸುವುದನ್ನು ನಿಲ್ಲಿಸಿ, ಅಂಥವರು ಆಸ್ಪತ್ರೆಗೆ ಬರದಂತೆ ನಿರ್ಬಂಧಿಸಬೇಕು. ಮಾಧ್ಯಮಗಳು ಘಟನೆಯ ಸತ್ಯಾಸತ್ಯತೆ ತಿಳಿಯದೆ ಸುದ್ದಿ ಪ್ರಸಾರ ಮಾಡುವುದನ್ನು ನಿಷೇಧಿಸಬೇಕು.
ಯಾವುದೇ ಸಂದರ್ಭದಲ್ಲಿಯೂ ದೈಹಿಕ ಹಲ್ಲೆ ನಡೆಸದಂತೆ ಭದ್ರತೆ ಒದಗಿಸಬೇಕು. ಆಸ್ಪತ್ರೆ ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆಗಳನ್ನು ನಿಷೇಧಿಸಿದ ಕಾನೂನನ್ನು ಸಂಪೂರ್ಣವಾಗಿ ಜಾರಿಗೆ ತಂದು ಇಂತಹ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಸಂಘಟನೆ ಪದಾಧಿಕಾರಿಗಳಾದ ರೋಹನ್ ಶೆಟ್ಟಿ, ರಾಘವೇಂದ್ರ ಭಟ್ಟ, ಮಧುಕೇಶ್ವರ ಜಿ.ವಿ, ಕೃಷ್ಣಮೂರ್ತಿ ರಾಯ್ಸದ್, ದಿನೇಶ ಹೆಗಡೆ, ವಿನಾಯಕ ಕಣ್ಣಿ, ರಾಜೇಶ ಶೇಟ್, ಅಜಿತ್ ಧಾಕಪ್ಪ, ರಮೇಶ ಹೆಗಡೆ, ಎನ್.ಆರ್.ಹೆಗಡೆ ಇತರರು ಇದ್ದರು.