ಗೋಣಿಕೊಪ್ಪಲು: ಇಲ್ಲಿಗೆ ಸಮೀಪವಿರುವ ಕುಟ್ಟದ ಪೂಜಿಕಲ್ಲು ಗ್ರಾಮದ ಹೊಟ್ಟೆಂಗಡ ಸುಬ್ಬಯ್ಯನವರ ಜಮೀನಿನಲ್ಲಿ 16 ವರ್ಷದ ಕಾಡೆಮ್ಮೆ ಶನಿವಾರ ಮೃತಪಟ್ಟಿದೆ.
ಕಾಡೆಮ್ಮೆಯ ಮೈ ಮೇಲೆ ಯಾವುದೇ ರೀತಿಯ ಗಾಯ ಅಥವಾ ಗುಂಡೇಟಿನ ಗುರುತು ಕಂಡು ಬಂದಿಲ್ಲ. ಹೀಗಾಗಿ ಇದು ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದು ಭಾವಿಸಲಾಗಿದೆ.
ಪೊನ್ನಂಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ, ವಲಯ ಅರಣ್ಯಾಧಿಕಾರಿ ಜಿ.ಎನ್. ಉತ್ತಯ್ಯ ಹಾಗೂ ಉಪ ವಲಯ ಅರಣ್ಯಾಧಿಕಾರಿ ಜುಲಾಲುದ್ಧೀನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶ್ರೀಮಂಗಲದ ಪಶು ವೈದ್ಯಾಧಿಕಾರಿ ಡಾ.ಗಿರೀಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಕಾಡೆಮ್ಮೆಯ ಹೊಟ್ಟೆಯಲ್ಲಿ ಕಾಫಿ ಬೀಜ ಕಂಡು ಬಂತು ಎನ್ನಲಾಗಿದೆ.